ಸಾರಾಂಶ
ಬೆಂಗಳೂರು : ಆರ್ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣದ ಎಫೆಕ್ಟ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೇಲೂ ಆಗುತ್ತಿದೆ. ಆ.11ರಿಂದ 27ರ ವರೆಗೂ 4ನೇ ಆವೃತ್ತಿಯ ಟೂರ್ನಿಯನ್ನು ಆಯೋಜಿಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಶುಕ್ರವಾರ ಘೋಷಿಸಿದೆ.
ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ. ಆದರೆ, ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶವಿರುವುದಿಲ್ಲ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವುದಾಗಿ ಕೆಎಸ್ಸಿಎ ಖಚಿತಪಡಿಸಿದೆ. ಕಾಲ್ತುಳಿತದ ಘಟನೆಯಿಂದಾಗಿ, ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಅವಕಾಶ ನೀಡಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.
ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ ಸೇರಿ ಕೆಲ ಪ್ರಮುಖ ಆಟಗಾರರು ಕಳೆದ ಆವೃತ್ತಿಯಲ್ಲಿ ತಾವಾಡಿದ್ದ ತಂಡಗಳಲ್ಲೇ ಉಳಿದುಕೊಂಡಿದ್ದಾರೆ. ಮನೀಶ್ ಪಾಂಡೆ, ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್ ಸೇರಿ ಇನ್ನೂ ಕೆಲ ತಾರಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
ಜು.15ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿ ತಂಡವು ಕನಿಷ್ಠ 16 ಹಾಗೂ ಗರಿಷ್ಠ 18 ಆಟಗಾರರನ್ನು ಹೊಂದಿರಬೇಕು.