ಸಾರಾಂಶ
ಲಖನೌ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಕೆ.ಎಲ್.ರಾಹುಲ್ ಇನ್ನಷ್ಟೇ ಸಂಪೂರ್ಣ ಚೇತರಿಸಿಕೊಳ್ಳಬೇಕಿದ್ದು, ಶನಿವಾರ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಲಖನೌ ಪರ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದರು.
ರಾಹುಲ್ ಬದಲು ನಿಕೋಲಸ್ ಪೂರನ್ ನಾಯಕತ್ವ ವಹಿಸಿದರು. ರಾಹುಲ್ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದು, ಬಳಿಕ ಸರಣಿಯಿಂದ ಹೊರಬಿದ್ದಿದ್ದರು. ಐಪಿಎಲ್ ವೇಳೆಗೆ ಫಿಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ವಿಕೆಟ್ ಕೀಪಿಂಗ್ ಮಾಡದೆ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆರಂಭಿಕ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿಯೇ ಆಡಿದ್ದರು.
ಅವರಿನ್ನೂ ಶೇ.100ರಷ್ಟು ಫಿಟ್ ಆಗದ ಕಾರಣ, ಟಿ20 ವಿಶ್ವಕಪ್ ದೃಷ್ಟಿಯಿಂದ ಶನಿವಾರದ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದರು. 9 ಎಸೆತಗಳಲ್ಲಿ 15 ರನ್ ಗಳಿಸಿ ನಿರ್ಗಮಿಸಿದರು.
ಪೊಲೀಸ್ ಕಾವಲಿನಲ್ಲಿ ಆಡಲಿರುವ ಹಾರ್ದಿಕ್!
ಮುಂಬೈ: ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಅಭಿಮಾನಿಗಳು ಕಿಚ್ಚಾಯಿಸುವುದನ್ನು ತಪ್ಪಿಸಲು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಪೊಲೀಸ್ ಕಾವಲು ಇರಲಿದೆ. ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಹಾರ್ದಿಕ್ರನ್ನು ಅಭಿಮಾನಿಗಳು ಹೀಯಾಳಿಸುತ್ತಿದ್ದಾರೆ. ಆದರೆ ಇದನ್ನು ತಪ್ಪಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ಕ್ರಮಕೈಗೊಂಡಿದ್ದು, ಪಂದ್ಯ ನಡೆಯುವಾಗ ಯಾರಾದರೂ ಪಾಂಡ್ಯಗೆ ಹೀಯಾಳಿಸಿದರೆ ಅವರನ್ನು ಕ್ರೀಡಾಂಗಣದಿಂದ ಹೊರಹಾಕಲು ಪೊಲೀಸರಿಗೆ ಮನವಿ ಮಾಡಿದೆ.