ಸಾರಾಂಶ
ನವದೆಹಲಿ: 3ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನ ಎಲ್ಲಾ 5 ಫ್ರಾಂಚೈಸಿಗಳು ಹರಾಜಿಗೂ ಮುನ್ನ ತಂಡದಲ್ಲೇ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಗುರುವಾರ ಪ್ರಕಟಿಸಿವೆ.
ಹಾಲಿ ಚಾಂಪಿಯನ್ ಆರ್ಸಿಬಿ ತಂಡ ನಾಯಕಿ ಸ್ಮೃತಿ ಮಂಧನಾ ಸೇರಿ 14 ಮಂದಿಯನ್ನು ರಿಟೈನ್ ಮಾಡಿಕೊಂಡಿದೆ.ಕರ್ನಾಟಕದ ಶ್ರೇಯಾಂಕ ಪಾಟೀಲ್, ಆಸ್ಟ್ರೇಲಿಯಾದ ಎಲೈಸಿ ಪೆರ್ರಿ, ನ್ಯೂಜಿಲೆಂಡ್ನ ಸೋಫಿ ಡಿವೈನ್, ರಿಚಾ ಘೋಷ್, ರೇಣುಕಾ ಸಿಂಗ್ ಕೂಡಾ ರಿಟೈನ್ ಆಗಿದ್ದಾರೆ. ಆದರೆ ಕರ್ನಾಟಕದ ಶುಭಾ ಸತೀಶ್ ಸೇರಿ 7 ಮಂದಿ ಹೊರಬಿದ್ದಿದ್ದಾರೆ.
ಇನ್ನು, ಮುಂಬೈ ಇಂಡಿಯನ್ಸ್ ಹರ್ಮನ್ಪ್ರೀತ್ ಕೌರ್, ಯಸ್ತಿಕಾ ಭಾಟಿಯಾ, ಪೂಜಾ, ಡೆಲ್ಲಿ ಕ್ಯಾಪಿಟಲ್ಸ್ ಜೆಮಿಮಾ, ಶಫಾಲಿ, ರಾಧಾ, ಮೆಗ್ ಲ್ಯಾನಿಂಗ್, ಯುಪಿ ವಾರಿಯರ್ಸ್ ತಂಡ ಕರ್ನಾಟಕದ ವೃಂದಾ ದಿನೇಶ್, ದೀಪ್ತಿ, ಅಲೀಸಾ ಹೀಲಿ, ಗುಜರಾತ್ ಜೈಂಟ್ಸ್ ತಂಡ ಆ್ಯಶ್ಲೆ ಗಾರ್ಡ್ನರ್, ಬೆಥ್ ಮೂನಿ ಸೇರಿ ಪ್ರಮುಖರನ್ನು ಉಳಿಸಿಕೊಂಡಿವೆ.
ವಿಶಾಖಪಟ್ಟಣಂನಲ್ಲಿ ಸಿಂಧು ಬ್ಯಾಡ್ಮಿಂಟನ್ ಅಕಾಡೆಮಿ
ವಿಶಾಖಪಟ್ಟಣಂ: 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ತಮ್ಮ ಕನಸಿನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟ್ಟಿದ್ದಾರೆ. ಬಂದರು ನಗರಿಯಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಯೊಂದನ್ನು ಸ್ಥಾಪಿಸಲು ಸಿದ್ಧತೆ ಆರಂಭಿಸಿದ್ದಾರೆ.
ಈ ಅಕಾಡೆಮಿಯಲ್ಲಿ ಬೇರೆ ಕ್ರೀಡೆಗಳ ತರಬೇತಿ ಕೇಂದ್ರಗಳೂ ಇರಲಿವೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಅಕಾಡೆಮಿಗಾಗಿ ನೆರವು ನೀಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಿಂಧು ಧನ್ಯವಾದ ಹೇಳಿದ್ದಾರೆ. ಸದ್ಯದಲ್ಲೇ ಅಕಾಡೆಮಿ ನಿರ್ಮಾಣ ಕಾರ್ಯ ಆರಂಭಗೊಳ್ಳುವುದಾಗಿ ತಿಳಿದುಬಂದಿದೆ.