ಸಾರಾಂಶ
ವಾಪಿ(ಗುಜರಾತ್): ಗುಜರಾತ್ನ ವಾಪಿ ಎಂಬಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ನಿರ್ಮಿಸಲಾಗಿದ್ದ ಗಣೇಶ ಪೆಂಡಾಲ್ನಲ್ಲಿ, ಭಾರತದ ಟಿ20 ವಿಶ್ವಕಪ್ ಗೆಲುವಿಗೆ ಕಾರಣವಾಗಿದ್ದ ಸೂರ್ಯಕುಮಾರ್ ಯಾದವ್ರ ಆಕರ್ಷಕ ಕ್ಯಾಚ್ನ ಕಲಾಕೃತಿ ತಯಾರಿಸಲಾಗಿದೆ. ಬಾಕ್ಸ್, ಮರದ ತುಂಡು ಹಾಗೂ ಇನ್ನಿತರ ಕೆಲ ಸಾಮಾಗ್ರಿಗಳನ್ನು ಬಳಸಿ ಕ್ರೀಡಾಂಗಣ, ಆಟಗಾರರ ಕಲಾಕೃತಿ ನಿರ್ಮಿಸಲಾಗಿದೆ. ಇದರಲ್ಲಿ ಸೂರ್ಯಕುಮಾರ್ ಬೌಂಡರಿ ಲೈನ್ ಬಳಿ ಕ್ಯಾಚ್ ಹಿಡಿಯುತ್ತಿರುವ ದೃಶ್ಯವಿದೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ದುಲೀಪ್ ಟ್ರೋಫಿ: 2ನೇ ಸುತ್ತಿಗೆ ರಿಂಕು ಸಿಂಗ್ ಆಯ್ಕೆ
ಅನಂತಪುರ(ಆಂಧ್ರಪ್ರದೇಶ): ಸೆ.12ರಿಂದ ಅನಂತಪುರದಲ್ಲಿ ಆರಂಭಗೊಳ್ಳಲಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ 2ನೇ ಸುತ್ತಿನ ಪಂದ್ಯಕ್ಕೆ ರಿಂಕು ಸಿಂಗ್ ಸೇರಿ ಕೆಲ ಆಟಗಾರರು ಆಯ್ಕೆಯಾಗಿದ್ದಾರೆ. ಮೊದಲ ಸುತ್ತಿನಲ್ಲಿ ಆಡಿದ್ದ ಹಲವು ಆಟಗಾರರು ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧ ಸರಣಿಗಾಗಿ ಭಾರತ ತಂಡ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಅವರ ಬದಲು ಇತರ ಕೆಲ ಆಟಗಾರರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ.
ರಿಷಭ್ ಪಂತ್ ಹಾಗೂ ಯಶಸ್ವಿ ಜೈಸ್ವಾಲ್ ಬದಲು ಭಾರತ ‘ಬಿ’ ತಂಡಕ್ಕೆ ರಿಂಕು ಹಾಗೂ ಸುಯಶ್ ಪ್ರಭುದೇಸಾಯಿ ಆಯ್ಕೆಯಾಗಿದ್ದಾರೆ. ಭಾರತ ‘ಡಿ’ ತಂಡಕ್ಕೆ ಅಕ್ಷರ್ ಪಟೇಲ್ ಬದಲು ನಿಶಾಂತ್ ಸಂಧು, ತುಷಾರ್ ದೇಶಪಾಂಡೆ ಬದಲು ಕನ್ನಡಿಗ ವಿದ್ವತ್ ಕಾವೇರಪ್ಪ ಸೇರ್ಪಡೆಗೊಂಡಿದ್ದಾರೆ. ಇನ್ನು, ಸರ್ಫರಾಜ್ ಖಾನ್ ಹಾಗೂ ಅಕಾಶ್ದೀಪ್ ಬಾಂಗ್ಲಾ ಸರಣಿಗೆ ಆಯ್ಕೆಯಾದರೂ ದುಲೀಪ್ ಟ್ರೋಫಿಯ 2ನೇ ಸುತ್ತಿನ ಪಂದ್ಯದಲ್ಲಿ ಆಡಲಿದ್ದಾರೆ. ಸೆ.15ರ ಬಳಿಕ ಭಾರತ ತಂಡ ಕೂಡಿಕೊಳ್ಳಲಿದ್ದಾರೆ.