ಸಾರಾಂಶ
ಖಲಿಸ್ತಾನಿ ಉಗ್ರರ ಕ್ರೌರ್ಯದ ಬಗ್ಗೆ ಹಾಗೂ 39 ವರ್ಷದ ಹಿಂದೆ ಏರ್ ಇಂಡಿಯಾ 182 ವಿಮಾನದ ಮೇಲೆ ನಡೆದ ಖಲಿಸ್ತಾನಿಗಳ ದಾಳಿಯ ಬಗ್ಗೆ ಕೆನಡಾ ಸಂಸದ ಹಾಗೂ ಕನ್ನಡಿಗ ಚಂದ್ರ ಆರ್ಯ ಸಂಸತ್ನಲ್ಲಿ ಭಾಷಣ ಮಾಡುವ ಮೂಲಕ ಕೆನಡಿಯನ್ನರಿಗೆ ಉಗ್ರರ ಕುರಿತು ಪಾಠ ಮಾಡಿದ್ದಾರೆ.
ಒಟ್ಟಾವಾ: ಇತ್ತೀಚೆಗೆ ಕೆನಡಾ ಸಂಸತ್ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಶೋಕಾಚರಣೆ ಆಚರಿಸಿದ ಬೆನ್ನಲ್ಲೇ, ಖಲಿಸ್ತಾನಿ ಉಗ್ರರ ಕ್ರೌರ್ಯದ ಬಗ್ಗೆ ಹಾಗೂ 39 ವರ್ಷದ ಹಿಂದೆ ಏರ್ ಇಂಡಿಯಾ 182 ವಿಮಾನದ ಮೇಲೆ ನಡೆದ ಖಲಿಸ್ತಾನಿಗಳ ದಾಳಿಯ ಬಗ್ಗೆ ಕೆನಡಾ ಸಂಸದ ಹಾಗೂ ಕನ್ನಡಿಗ ಚಂದ್ರ ಆರ್ಯ ಸಂಸತ್ನಲ್ಲಿ ಭಾಷಣ ಮಾಡುವ ಮೂಲಕ ಕೆನಡಿಯನ್ನರಿಗೆ ಉಗ್ರರ ಕುರಿತು ಪಾಠ ಮಾಡಿದ್ದಾರೆ.
ಗುರುವಾರ ಸಂಸತ್ನಲ್ಲಿ ಮಾತನಾಡಿದ ಚಂದ್ರ ಆರ್ಯ, ‘39 ವರ್ಷಗಳ ಹಿಂದೆ ಖಲಿಸ್ತಾನಿ ತೀವ್ರಗಾಮಿಗಳು ಏರಿಂಡಿಯಾ ವಿಮಾನ ಸ್ಫೋಟಿಸಿ 329 ಜನರನ್ನು ಬಲಿ ಪಡೆದಿದ್ದರು. ಈ ಪೈಕಿ ಬಹುತೇಕರು ಕೆನಡಾ ಪ್ರಜೆಗಳೇ ಆಗಿದ್ದರು. ಇದು ಕೆನಡಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಹತ್ಯಾಕಾಂಡ. ಇದನ್ನು ನಾವು ಮರೆಯಬಾರದು.
ದುರಂತವೆಂದರೆ ಇಂಥ ಉಗ್ರ ಕೃತ್ಯಕ್ಕೆ ಕಾರಣವಾದ ಸಿದ್ದಾಂತ ದೇಶದಲ್ಲಿ ಇನ್ನೂ ಜೀವಂತ ಇದೆ ಎನ್ನುವುದು ಹಲವು ಕೆನಡಿಯನ್ನರಿಗೆ ತಿಳಿದಿಲ್ಲ. ಖಲಿಸ್ತಾನಿಗಳ ಕೆಲ ಕೃತ್ಯಗಳು ಹಿಂದೂ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ ಇತ್ತೀಚೆಗೆ ಅವರು ಮಾಜಿ ಪ್ರಧಾನಿ ಇಂದಿರಾ ಹತ್ಯೆ ಪ್ರಕರಣವನ್ನು ಸಂಭ್ರಮಿಸಿದ್ದಾರೆ. ಇಂಥ ಕರಾಳ ಶಕ್ತಿಗಳು ಮತ್ತೆ ಚಿಗಿತುಕೊಳ್ಳಲು ಅವಕಾಶ ನೀಡುವುದು ಹಿಂಸೆ ಮತ್ತು ದ್ವೇಷಕ್ಕೆ ಉತ್ತೇಜನ ನೀಡಿದಂತೆ ಎಂದು ಆರ್ಯ ಎಚ್ಚರಿಸಿದರು.
ಇದೇ ವೇಳೆ ಕನಿಷ್ಕಾ ವಿಮಾನ ದುರಂತ ನಡೆದ ಜೂ.23ರಂದು ವ್ಯಾಂಕೋವರ್ನಲ್ಲಿ ರಾಷ್ಟ್ರೀಯ ಸ್ಮರಣಾರ್ಥ ದಿನ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಜನರು ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.