ಸಾರಾಂಶ
ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್ ಪ್ರಶ್ನೆ ಮಾಡಿ ಕೆನಡಾಗೆ ಭಾರತದ ಮೇಲೆ ಮಾಡುತ್ತಿರುವ ಆರೋಪಕ್ಕೆ ಸಾಕ್ಷ್ಯ ಕೇಳಿದ್ದಾರೆ. ಈ ಮೂಲಕ ತನ್ನ ಅತ್ಯಾಪ್ತ ಮಿತ್ರ ದೇಶದಿಂದಲೇ ಆಕ್ಷೇಪ ಎದುರಿಸಿ ಕೆನಡಾ ಮುಜುಗರ ಅನುಭವಿಸಿದೆ.
ನವದೆಹಲಿ: ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿರುವುದಕ್ಕೆ ಸಾಕ್ಷ್ಯ ಎಲ್ಲಿದೆ ಎಂದು ಕೆನಡಾ ಮಿತ್ರದೇಶವಾಗಿರುವ ನ್ಯೂಜಿಲೆಂಡ್ನ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವರೂ ಆಗಿರುವ ವಿನ್ಸ್ಟನ್ ಪೀಟರ್ಸ್ ಪ್ರಶ್ನಿಸಿದ್ದಾರೆ.
ಭಾರತೀಯ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಕೆನಡಾ ಪ್ರಧಾನಿ ಟ್ರೂಡೋ ಸದಾ ಕಾಲ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿರುವುದಾಗಿ ಆರೋಪಿಸುತ್ತಾರೆ. ಆದರೆ ಆ ಕುರಿತು ಸಾಕ್ಷ್ಯ ಎಲ್ಲಿದೆ ಎಂದು ನುರಿತ ವಕೀಲನಾಗಿ ಅವರನ್ನು ಪ್ರಶ್ನಿಸುತ್ತೇನೆ’ ಎಂದರು.ಅಲ್ಲದೆ ‘ಫೈವ್ ಐಸ್’ ಮಿತ್ರಕೂಟದಲ್ಲಿ ಸದಸ್ಯರಾಗಿರುವ ಕೆನಡಾ-ನ್ಯೂಜೆಲೆಂಡ್ ಈ ಕುರಿತು ಹಿಂದಿನ ಸರ್ಕಾರದ ಅವಧಿಯಲ್ಲಿ ಚರ್ಚಿಸಿತ್ತು ಎಂಬುದಾಗಿಯೂ ತಿಳಿಸಿದ್ದಾರೆ.