ಪೈಪ್ ಲೈನ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಿ: ಮಾಜಿ ಸಚಿವ ಸೊಗಡು ಶಿವಣ್ಣ

| Published : May 07 2024, 01:04 AM IST

ಪೈಪ್ ಲೈನ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಿ: ಮಾಜಿ ಸಚಿವ ಸೊಗಡು ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯಲ್ಲಿ 35.4 ಕಿ.ಮೀ ಉದ್ದದ ಪೈಪ್‌ಲೈನ್ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ಹೆಚ್. ನಿಂಗಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯಲ್ಲಿ 35.4 ಕಿ.ಮೀ ಉದ್ದದ ಪೈಪ್‌ಲೈನ್ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ಹೆಚ್. ನಿಂಗಪ್ಪ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಪ್ರಾಣಿ, ದನ ಕರುಗಳಿಗೆ ಒಟ್ಟಿನಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಲಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಈ ಯೋಜನೆ ನಿಲ್ಲಿಸದಿದ್ದರೆ ತೀವ್ರ ಹೋರಾಟಕ್ಕೂ ಧುಮುಕುವುದಾಗಿ ತಿಳಿಸಿದರು.

ರೈತ ಸಂಘಟನೆಗಳ ಮುಖಂಡರು ಸೇರಿಕೊಂಡು ತುಮಕೂರು ಜಿಲ್ಲೆಯ ಎಲ್ಲ ಮಠ-ಮಾನ್ಯಗಳು ಮಠಾಧೀಶರು, ಹರಗುರು ಚರಮೂರ್ತಿಗಳ ಆರ್ಶೀವಾದದೊಂದಿಗೆ ಬಹೃತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು. ಹೇಮಾವತಿ ಜಲಾಶಯ ಯೋಜನೆಯಡಿ ಬರುವ ಶಾಖಾ ನಾಲೆಯು 0. ಕಿ,ಮೀ ಯಿಂದ 228 ಕಿ.ಮೀ. ಇರುತ್ತದೆ. ಈ ನಾಲೆಯು 191 ಕಿ.ಮೀ ವರೆಗೆ ಮಾಗಡಿ ತಾಲೂಕು ಕೆರೆಗಳಿಗೆ ನೀರು ತುಂಬಿಸುವ ಶ್ರೀರಂಗ ಏತ ನೀರಾವತಿ ಯೋಜನೆ ಆಗಿದೆ ಎಂದರು.

ರಾಜಕೀಯ ಲಾಭಕ್ಕಾಗಿ ಈ ಯೋಜನೆಗೆ ಹೆಚ್ಚು ನೀರು ಹರಿಸುವ ಸಲುವಾಗಿ ತುಮಕೂರು ಶಾಖಾ ನಾಲೆಯ 70 ನೇ ಕಿ.ಮೀ. ನಿಂದ 168 ಕಿ.ಮೀ. ನೇರ ಸಂಪರ್ಕ ಕಲ್ಪಿಸುವ ಸುಮಾರು 35.4 ಕಿ.ಮೀ. ಉದ್ದದ ಪೈಪ್‌ಲೈನ್ ಲಿಂಕ್ ಕೆನಾಲ್ (ಎಕ್ಸ್ಪ್ರೆಸ್ ಕೆನಾಲ್) ಯೋಜನೆ ಮಾಡಿಸುವ ಮೂಲಕ ಅನಾವಶ್ಯಕವಾಗಿ ಸಾರ್ವಜನಿಕರ ಸಾವಿರಾರು ಕೋಟಿ ತೆರಿಗೆ ಹಣವನ್ನು ಸರ್ಕಾರದ ನೀತಿ-ನಿರೂಪಣಿಗಳಿಗೆ ವಿರುದ್ದವಾಗಿ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು.ಈ ಯೋಜನೆಯನ್ನು ಮಾಡಲೇಬೇಕಾದ ಅವಶ್ಯಕತೆ ಇದ್ದರೆ 70 ಕಿ.ಮೀ ನಿಂದ 167. ಕಿ.ಮೀ. ವರೆಗೆ ನಾಲಾ ಆಧುನೀಕರಣ ಮಾಡಿಸಿದ್ದಾದರು ಏಕೆ ?. ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಸಲು ಸಾಧ್ಯಾಗುತ್ತಿಲ್ಲವೆಂದು ವರದಿಯಲ್ಲಿ ಹೇಳಿರುವ ಅಧಿಕಾರಿ ವರ್ಗದವರ ನಡೆಯನ್ನು ಸೂಕ್ಮವಾಗಿ ಗಮನಿಸಿ. ಪೈಪ್‌ಲೈನ್ ಲಿಂಕ್ ಕೆನಾಲ್ ಯೋಜನೆಯಿಂದ ಸಾವಿರಾರು ಕೋಟಿಗಳನ್ನು ಸರ್ಕಾರದ ಬೊಕ್ಕಸಕ್ಕೆ ನಷ್ಠ ಉಂಟಾಗಲಿದೆ ಎಂದರು.

ತುಮಕೂರು ಶಾಖಾ ನಾಲೆಯ 70 ಕಿ.ಮೀ ನಿಂದ 167 ಕಿ,ಮೀ ವರೆಗೆ ಗುಬ್ಬಿ, ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಸುಮಾರು 23 ಕುಡಿಯುವ ನೀರಿನ ಯೋಜನೆಗಳು ಮತ್ತು ಸುಮಾರು 23 ಅಚ್ಚುಕಟ್ಟಿಗೆ ನೀರುಣಿಸುವ ಉಪ ಕಾಲುವೆಗಳಿವೆ. ಮೇಲ್ಕಂಡ ಯೋಜನೆ ಕಾರ್ಯಗತವಾದರೆ ಅಚ್ಚುಕಟ್ಟು ಪ್ರದೇಶಗಳು ಹಾಗಿರಲಿ ಐದಾರು ತಾಲ್ಲೂಕುಗಳ ಜನ ಮತ್ತು ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗೂ ಸಹ ತುಂಬಾ ಹಾಹಾಕಾರ ಉಂಟಾಗಿ ಶೋಚನೀಯ ಪರಿಸ್ಥಿತಿ ಉದ್ಬವಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಹಾಗೂ ಜಲಸಂಪನ್ಮೂಲ ಸಚಿವರ ಒತ್ತಡದ ಮೇರೆಗೆ ಅಧಿಕಾರಿಗಳು ಈ ಯೋಜನೆಯನ್ನು ರೂಪಿಸಿರುವುದು ಜಡ್ಡುಗಟ್ಟಿದ- ತುಕ್ಕು ಹಿಡಿದ ಸರ್ಕಾರದ ಆಡಳಿತ ಯಂತ್ರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಯೋಜನೆಯನ್ನು ಆಳವಾಗಿ ಅಧ್ಯಯನ ಮಾಡಿ ನೋಡುವುದಾದರೆ ಈ ಯೋಜನೆಯು ಬ್ರಹ್ಮಾಂಡ ಭ್ರಷ್ಠಾಚಾರದ ಪ್ರತೀಕವಾಗಿದೆ. ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಲು ನಡೆಸಿರುವ ಹುನ್ನಾರವಾಗಿದೆ ಎಂದರು.

ಆದ್ದರಿಂದ ಈ ಅವೈಜ್ಞಾನಿಕವಾಗಿರುವ ಹಾಗೂ ಅಮಾನವೀಯತೆಯಿಂದ ಕೂಡಿರುವ ಬಹಳಷ್ಟು ಅಡ್ಡ ಪರಿಣಾಮಗಳಿಗೆ ಕಾರಿಣಿಭೂತವಾಗಿರುವ ಈ ಯೋಜನೆಯನ್ನು ತುರ್ತಾಗಿ ನಿಲ್ಲಿಸಬೇಕು. ಮುಂದುವರೆದು ಹಾಲಿ ಇರುವ ನಾಲೆಯಲ್ಲಿಯೇ ನೀರನ್ನು ಹರಿಸಬೇಕು ಎಂದು ಆಗ್ರಹಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಲಕ್ಷ್ಮೀನಾರಾಯಣಗೌಡ ಇದ್ದರು.