ಗಲ್ಲಿ ಗಲ್ಲಿ ಸುತ್ತಿದ ಮೈಸೂರು ಮಹಾರಾಜ : ದಲಿತರ ಮನೆಯಲ್ಲಿ ಉಪಹಾರ

| Published : May 06 2024, 12:36 AM IST / Updated: May 06 2024, 02:20 PM IST

ಗಲ್ಲಿ ಗಲ್ಲಿ ಸುತ್ತಿದ ಮೈಸೂರು ಮಹಾರಾಜ : ದಲಿತರ ಮನೆಯಲ್ಲಿ ಉಪಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಮಹಾರಾಜ ಯದುವೀರ ಶ್ರೀಕಂಠದತ್ತ ಒಡೆಯರು ಗಲ್ಲಿ ಗಲ್ಲಿ, ಹಳ್ಳಿ ಹಳ್ಳಿ ಸುತ್ತಿ ಮತಯಾಚನೆ ಮಾಡಿದರು.

  ಕೊಪ್ಪಳ :  ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರವಾಗಿ ಮೈಸೂರು ಮಹಾರಾಜ ಯದುವೀರ ಶ್ರೀಕಂಠದತ್ತ ಒಡೆಯರು ಗಲ್ಲಿ ಗಲ್ಲಿ, ಹಳ್ಳಿ ಹಳ್ಳಿ ಸುತ್ತಿ ಮತಯಾಚನೆ ಮಾಡಿದರು. ಅಷ್ಟೇ ಅಲ್ಲ, ಕೊಪ್ಪಳ ಮಠಕ್ಕೂ ಭೇಟಿ ನೀಡಿದ್ದರಲ್ಲದೆ ಕೊಪ್ಪಳ ನಗರದ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದರು.

ಬೆಳಗ್ಗೆ ನಗರಕ್ಕೆ ಆಗಮಿಸಿದ ಯದುವೀರ ಒಡೆಯರ ಗವಿಮಠಕ್ಕೆ ಭೇಟಿ ನೀಡಿ, ಶ್ರೀ ಗವಿಸಿದ್ದೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆದರು. ಬಳಿಕ ಗವಿಮಠ ಶ್ರೀಗಳೊಂದಿಗೆ ಕೆಲಕಾಲ ಚರ್ಚೆ ಮಾಡಿದರು.

ದಲಿತರ ಮನೆಯಲ್ಲಿ ಉಪಾಹಾರ:  ನಗರದ 12ನೇ ವಾರ್ಡಿನ ನಿವಾಸಿ ದಲಿತ ಕುಟಂಬವಾಗಿರುವ ಮಂಜುನಾಥ ಟಪಾಲ್ ಮನೆಯಲ್ಲಿ ಉಪಾಹಾರ ಸೇವಿಸಿದರು. ರಾಜ ಎನ್ನುವ ಹಮ್ಮು, ಬಿಮ್ಮು ಇಲ್ಲದೆ ಸರಳವಾಗಿಯೇ ದಲಿತರ ಮನೆ ಸೇರಿದಂತೆ ಜನರೊಂದಿಗೆ ಬೆರೆಯುವ ಮೂಲಕ ಎಲ್ಲ ಪ್ರೀತಿಗೆ ಪಾತ್ರವಾದರು.

ಉಪಾಹಾರ ಸೇವಿಸುತ್ತಲೇ ಮಾತನಾಡಿದ ಅವರು, ನಮ್ಮಲ್ಲಿ ಸಮಾನತೆ ಬರಬೇಕಾಗಿದೆ. ಯಾವುದೇ ವ್ಯತ್ಯಾಸ ಇಲ್ಲದಂತೆ, ಮೇಲು ಮತ್ತು ಕೀಳು ಭಾವನೆಯಿಂದ ಹೊರಬರಬೇಕು. ಇದನ್ನು ನಮ್ಮ ಮಹಾರಾಜರ ಕಾಲದಲ್ಲಿಯೇ ತರುವ ಪ್ರಯತ್ನ ಮಾಡಲಾಗಿತ್ತು ಎಂದು ಸ್ಮರಿಸಿಕೊಂಡರು. ಬಿಜೆಪಿ ನಾಯಕ ಅಪ್ಪಣ್ಣ ಪದಕಿ ಸೇರಿದಂತೆ ಮೊದಲಾವದರು ಇದ್ದರು.

ಹುಚ್ಚಮ್ಮನ ಮನೆಗೆ ಭೇಟಿ:  ದಾನಚಿಂತಾಮಣಿ ಎಂದೇ ಖ್ಯಾತಿಯಾಗಿರುವ ಕುಣಿಕೇರಿಯ ಹುಚ್ಚಮ್ಮ ಅವರ ಮನೆಗೆ ಯದುವೀರ ಒಡೆಯರ ಭೇಟಿ ನೀಡಿದರು. ಹುಚ್ಚಮ್ಮ ತನ್ನ 2 ಎಕರೆ ಭೂಮಿಯನ್ನು ಶಾಲೆಗೆ ದಾನ ನೀಡಿದ ಹಿನ್ನೆಲೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿದೆ. ಈ ಕುರಿತು ಒಡೆಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಣಿಕೇರಿಯಲ್ಲಿ ಪ್ರಚಾರ:

ಯದುವೀರ ಒಡೆಯರ ಕೊಪ್ಪಳ ನಗರ, ಕುಣಿಕೇರಿ ಗ್ರಾಮ, ಕುಣಿಕೇರಿ ತಾಂಡಾ ಸೇರಿದಂತೆ ಹಲವು ಕಡೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದರು. ಈ ವೇಳೆಯಲ್ಲಿ ಜನಸಾಮಾನ್ಯರೊಂದಿಗೆ ಸರಳವಾಗಿಯೇ ಬೆರೆಯುತ್ತಿದ್ದರು. ಸಾಮಾನ್ಯರ ಜತೆಯಲ್ಲಿದ್ದಾಗ ಬಿಜೆಪಿಗೆ ಮತಹಾಕುವಂತೆ ಮನವಿ ಮಾಡುತ್ತಿದ್ದರು.

ಕಾನೂನು ರೀತಿ ಕ್ರಮವಾಗಲಿದೆ:

ಹಾಸನ್ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಏನು ಆಗಬೇಕೋ ಅದು ಆಗಿಯೇ ಆಗುತ್ತದೆ ಎಂದು ಮೈಸೂರು ಮಹಾರಾಜ ಯದುವೀರ ಒಡೆಯರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ತನ್ನ ನಿಲುವು ಪ್ರಕಟಿಸಿದೆ. ಹೀಗಾಗಿ, ಪಕ್ಷದ ನಿಲುವೇ ನನ್ನ ನಿಲುವಾಗಿದೆ. ಏನೇ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಿಯೇ ಆಗುತ್ತದೆ. ರಾಜ್ಯ ಸರ್ಕಾರವೂ ಈಗಾಗಲೇ ಎಸ್‌ಐಟಿ ಮೂಲಕ ತನಿಖೆ ನಡೆಸುತ್ತಿದೆ ಎಂದರು.

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಗ್ಯಾರಂಟಿಯಾಗಿದ್ದಾರೆ. ಹೀಗಾಗಿ, ರಾಜ್ಯದ ಮತದಾರರು ಬಿಜೆಪಿ ಪರವಾಗಿ ಒಲವು ಹೊಂದಿದ್ದು, ಬಿಜೆಪಿ ಪರವಾಗಿ ಫಲಿತಾಂಶ ಬರಲಿದೆ ಎನ್ನುವ ವಿಶ್ವಾಸವಿದೆ. ಹಾಗೆಯೇ ತಮಗೂ ಮತದಾರರು ಅವಕಾಶ ನೀಡಿದರೆ ಖಂಡಿತವಾಗಿಯೂ ಉತ್ತಮ ಸೇವೆ ಮಾಡುವುದಾಗಿ ಹೇಳಿದರು.