ಸಾರಾಂಶ
ಆಸ್ತಿ ವಿಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸೇರಿದಂತೆ ಏಳು ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು : ಆಸ್ತಿ ವಿಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸೇರಿದಂತೆ ಏಳು ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮೂವರು ಸರ್ಕಾರಿ ಸಿಬ್ಬಂದಿ ಮತ್ತು ನಾಲ್ವರು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ದೂರುದಾರ ಚನ್ನೆಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎ.ವಿ.ಕುಮಾರ್ ಮೊದಲೇ ಆರೋಪಿಯಾಗಿದ್ದಾರೆ. ಇನ್ನುಳಿದಂತೆ ಕಾನ್ಸ್ಟೇಬಲ್ ಎಸ್.ಬಿ.ಉಮೇಶ್, ಅನಂತ್ ಮತ್ತು ಖಾಸಗಿ ವ್ಯಕ್ತಿಗಳಾದ ಸಿ.ಪಿ.ಗವಿಗೌಡ, ಸಿ.ಕೆ.ದಿವ್ಯಾ, ಸೋಮಶೇಖರ್ ಆರಾಧ್ಯ, ದಿನೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಇತರೆ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿದೆ.
ಏ.1ರಂದು ನಡೆದ ಮುಖ್ಯಮಂತ್ರಿಗಳ ಪದಕ ವಿತರಣೆ ಸಮಾರಂಭಕ್ಕೆ ಇನ್ಸ್ಪೆಕ್ಟರ್ ಕುಮಾರ್ ಗೈರಾಗಿದ್ದು, ಲೋಕಾಯುಕ್ತ ಪೊಲೀಸರ ದಾಳಿಯಿಂದ ಪರಾರಿಯಾಗಿದ್ದರು. ಬಳಿಕ ಠಾಣೆಗೆ ಹಾಜರಾಗಿದ್ದರು. ವಂಚನೆ ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ₹4 ಕೋಟಿ ಮೌಲ್ಯದ ಮನೆಯನ್ನು ಗವಿಗೌಡ ಹೆಸರಿಗೆ ಬೇನಾಮಿಯಾಗಿ ಮಾಡಿಕೊಡಲು ಗುತ್ತಿಗೆದಾರ ಚನ್ನೇಗೌಡ ದಂಪತಿಗೆ ಒತ್ತಡ ಹೇರಲಾಗಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಕೆಂಗೇರಿ ಬಳಿಯ ಶೈಲಂ ಹೋಟೆಲ್ನಲ್ಲಿ ಇಬ್ಬರು ಪೊಲೀಸರು ಮಾತುಕತೆಗೆ ಕರೆದಿದ್ದರು. ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ಎರಡು ತಂಡಗಳಾಗಿ ದಾಳಿ ನಡೆಸಿದವು. ಇದೀಗ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.