ಕಸಕ್ಕೆ ಹಚ್ಚಿದ್ದ ಬೆಂಕಿಗೆ 4 ವಾಹನಗಳು ಆಹುತಿ

| Published : Apr 06 2025, 01:45 AM IST

ಸಾರಾಂಶ

ಕಸದ ರಾಶಿಯ ಬೆಂಕಿ ವ್ಯಾಪಿಸಿ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ಎರಡು ಟೋಯಿಂಗ್‌ ವಾಹನ ಸೇರಿ ಒಟ್ಟು ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ಶಿವಾಜಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಸದ ರಾಶಿಯ ಬೆಂಕಿ ವ್ಯಾಪಿಸಿ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ಎರಡು ಟೋಯಿಂಗ್‌ ವಾಹನ ಸೇರಿ ಒಟ್ಟು ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ಶಿವಾಜಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಂಟೋನ್ಮೆಂಟ್‌ ರೈಲು ನಿಲ್ದಾಣ ಸಮೀಪದ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ. ಅದೃವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾಣಿ ಸಂಭವಿಸಿಲ್ಲ. ರಸ್ತೆ ಪಕ್ಕ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಸಮೀಪದಲ್ಲೇ ನಿಲುಗಡೆ ಮಾಡಿದ್ದ ಎರಡು ಟೋಯಿಂಗ್‌ ವಾಹನಗಳು ಹಾಗೂ ಕೋಳಿ ಅಂಗಡಿಗೆ ಸೇರಿದ ಎರಡು ವಾಹನಕ್ಕೆ ಆ ಬೆಂಕಿ ತಾಕಿ ಹೊತ್ತಿ ಉರಿಯಲು ಆರಂಭಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಸದ ರಾಶಿಯ ಬೆಂಕಿ ಸಮೀಪದಲ್ಲೇ ನಿಲುಗಡೆ ಮಾಡಿದ್ದ ವಾಹನಗಳಿಗೂ ವ್ಯಾಪಿಸಿ ಹೊತ್ತಿ ಉರಿದಿದೆ. ಈ ಸಂಬಂಧ ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.