ಸಾರಾಂಶ
ಮಳವಳ್ಳಿ ತಾಲೂಕಿನ ಕಿರುಗಾವಲು ರಾಧಾಶ್ರೀ ಸರ್ವಿಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಮಾಲೀಕರಿಗೆ ಕ್ಯಾಶಿಯರ್ 41 ಲಕ್ಷ ರು. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ
ಮಳವಳ್ಳಿ : ತಾಲೂಕಿನ ಕಿರುಗಾವಲು ರಾಧಾಶ್ರೀ ಸರ್ವಿಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಮಾಲೀಕರಿಗೆ ಕ್ಯಾಶಿಯರ್ 41 ಲಕ್ಷ ರು. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದ ಎನ್.ಶಿವಕುಮಾರ್ ವಂಚನೆ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿ. ಕಳೆದ 15 ವರ್ಷಗಳಿಂದ ಕಿರುಗಾವಲು ಪೆಟ್ರೋಲ್ ಬಂಕ್ ನಡೆಸುತ್ತಿರುವ ವೆಂಕಟಾಚಲಪತಿ ಅವರ ಬಳಿ ಏಳೆಂಟು ವರ್ಷಗಳಿಂದ ಆರೋಪಿ ಎನ್.ಶಿವಕುಮಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ. 2023ರ ಸೆಪ್ಟೆಂಬರ್ನಲ್ಲಿ ಲೆಕ್ಕಪತ್ರ ಪರಿಶೀಲನೆ ವೇಳೆ ಎನ್.ಶಿವಕುಮಾರ್ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಎಚ್ಚೆತ್ತ ಮಾಲೀಕರು ಸಂಪೂರ್ಣವಾಗಿ ಲೆಕ್ಕ ಪರಿಶೋಧನೆ ನಡೆಸಿದ ವೇಳೆ ಬರೋಬರಿ 41 ಲಕ್ಷ ರು. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಮಾಲೀಕ ವೆಂಕಟಾಚಲಪತಿ, ಯಾವುದೇ ಸಣ್ಣ ಅನುಮಾನ ಬಾರದ ರೀತಿಯಲ್ಲಿ ಆರೋಪಿ ಏಳೆಂಟು ವರ್ಷಗಳಿಂದ ವಂಚಿಸುತ್ತಿದ್ದ 2023ರ ಸೆಪ್ಟೆಂಬರ್ ನಲ್ಲಿ ನನ್ನ ಮಗ ಪೆಟ್ರೋಲ್ ಬಂಕ್ ಗೆ ಬಂದು ಲೆಕ್ಕ ಪರಿಶೀಲನೆ ನಡೆಸಿದ ವೇಳೆ ವಂಚನೆ ಮಾಡಿರುವುದು ಗೊತ್ತಾಗಿದೆ ಎಂದರು.
ನಂತರ ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದವು. ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಳೆದೊಂದು ವಾರದ ಹಿಂದೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನನಗಾದ ವಂಚನೆ ಮತ್ತೊಬ್ಬರಿಗೆ ಆಗಬಾರದು. ಹೀಗಾಗಿ ಎಲ್ಲ ಪೆಟ್ರೋಲ್ ಬಂಕ್ ಮಾಲೀಕರು ಜಾಗೃತಿ ವಹಿಸಬೇಕು ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್. ಭರತ್ ರಾಜ್ ಮಾತನಾಡಿ, ಇಂಥ ವಂಚನೆ ಪ್ರಕರಣಗಳ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಹಾಗೂ ಪೊಲೀಸ್ ಇಲಾಖೆ ಸಹ ತ್ವರಿತಗತಿಯಲ್ಲಿ ತನಿಖೆ ನಡೆಸಿ ಪೆಟ್ರೋಲ್ ಬಂಕ್ ಮಾಲೀಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.