₹10.65 ಲಕ್ಷದ 5 ಕಾರು, 2 ಬೈಕ್‌ ಕದ್ದಿದ್ದವರ ಬಂಧನ

| Published : Feb 07 2024, 01:48 AM IST

ಸಾರಾಂಶ

ಬೈಕ್‌, ಕಾರು ಕಳ್ಳತನ ಕೃತ್ಯ ಬಯಲು ಮಾಡಿರುವ ಬೆಂಗಳೂರಿನ ಕೋರಮಂಗಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ವಾಹನಗಳ ಕಳ್ಳತನದಲ್ಲಿ ತೊಡಗಿದ್ದ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಸಮೀಪದ ಚಲ್ಲಘಟ್ಟದ ನಿವಾಸಿಗಳಾದ ಪ್ರದೀಪ್‌, ಭರತ್ ಹಾಗೂ ತೇಜಸ್ ಬಂಧಿತರಾಗಿದ್ದು, ಆರೋಪಿಗಳಿಂದ 5 ಕಾರು ಹಾಗೂ 2 ಬೈಕ್‌ಗಳು ಸೇರಿದಂತೆ ₹10.65 ಲಕ್ಷ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ನಗರದಲ್ಲಿ ವಾಹನಗಳ ಕಳವು ಹೆಚ್ಚಳ ಹಿನ್ನೆಲೆಯಲ್ಲಿ ಖದೀಮರ ಪತ್ತೆಗೆ ವಿಶೇಷ ತಂಡ ರಚಿಸಲಾಯಿತು. ಈ ತಂಡವು ಕೃತ್ಯ ನಡೆದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಕುರಿತು ಮಾಹಿತಿ ಲಭ್ಯವಾಯಿತು. ಈ ಸುಳಿವು ಆಧರಿಸಿ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮೂವರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಅವರ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಲಭವಾಗಿ ಹಣ ಸಂಪಾದನೆಗೆ ವಾಹನ ಕಳ್ಳತನದಲ್ಲಿ ಆರೋಪಿಗಳು ತೊಡಗಿದ್ದರು.

ಸರಗಳ್ಳತನದಲ್ಲಿ ಜೈಲುಸೇರಿದ ದರೋಡೆಕೋರ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸರಗಳ್ಳತನದಲ್ಲಿ ತೊಡಗಿದ್ದ ಕಿಡಿಗೇಡಿಯೊಬ್ಬನನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರದ ನಿವಾಸಿ ಆರ್.ಪ್ರಜ್ವಲ್‌ ಬಂಧಿತನಾಗಿದ್ದು, ಆರೋಪಿಯಿಂದ ₹1 ಲಕ್ಷ ರು ಮೌಲ್ಯದ 16 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಹೊಸಕೋಟೆಯ ಅಜಿತ್ ಹಾಗೂ ಅಭಿಷೇಕ್ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ಕೆ.ಆರ್.ಪುರ ಸಮೀಪ ಬೈಕ್ ಸವಾರನನ್ನು ಮುಂಜಾನೆ ಅಡ್ಡಗಟ್ಟಿ ಚಿನ್ನದ ಸರ ದೋಚಿ ಕಿಡಿಗೇಡಿ ಪರಾರಿಯಾಗಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಆರೋಪಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಕೆ.ಆರ್‌.ಪುರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಈಗ ಮತ್ತೆ ಸರಗಳ್ಳತನ ಎಸಗಿ ಪ್ರಜ್ವಲ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.