ಪಿಡಿಒ ಸೇರಿ 7 ಮಂದಿಗೆ ತಲಾ ಒಂದು ಸಾವಿರ ದಂಡ ವಿಧಿಸಿ ಜಿಪಂ ಒಂಬುಡ್ಸ್‌ಮನ್ ತೀರ್ಪು..!

| N/A | Published : Jun 16 2025, 01:12 AM IST / Updated: Jun 16 2025, 04:52 AM IST

ಸಾರಾಂಶ

ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ನಡೆದಿರುವ ಸಿಸಿ ಚರಂಡಿ ಕಾಮಗಾರಿಯಲ್ಲಿ ಲೋಪವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾರಣರಾದ ಪಿಡಿಒ, ಟಿಎಇ ಮಾಜಿ ಅಧ್ಯಕ್ಷರು ಸೇರಿದಂತೆ ಏಳು ಮಂದಿಗೆ ತಲಾ ಒಂದು ಸಾವಿರ ದಂಡ ವಿಧಿಸಿ ಜಿಲ್ಲಾ ಪಂಚಾಯ್ತಿ ಒಂಬುಡ್ಸ್‌ಮನ್ ತೀರ್ಪು ನೀಡಿದೆ.

 ಮಂಡ್ಯ : ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ನಡೆದಿರುವ ಸಿಸಿ ಚರಂಡಿ ಕಾಮಗಾರಿಯಲ್ಲಿ ಲೋಪವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾರಣರಾದ ಪಿಡಿಒ, ಟಿಎಇ ಮಾಜಿ ಅಧ್ಯಕ್ಷರು ಸೇರಿದಂತೆ ಏಳು ಮಂದಿಗೆ ತಲಾ ಒಂದು ಸಾವಿರ ದಂಡ ವಿಧಿಸಿ ಜಿಲ್ಲಾ ಪಂಚಾಯ್ತಿ ಒಂಬುಡ್ಸ್‌ಮನ್ ತೀರ್ಪು ನೀಡಿದೆ.

ಹಿಂದಿನ ಪಿಡಿಒ ಕೋಮಲಾ, ಮಂಡ್ಯ ತಾಪಂ ಟಿಎಇ ನವೀನ್‌ಕುಮಾರ್, ಹಿಂದಿನ ಟಿಎಇ ಗಿರೀಶ್, ಟಿಸಿ ರವಿಕುಮಾರ್, ಗೋಪಾಲಪುರ ಗ್ರಾಪಂ ಮಾಜಿ ಅಧ್ಯಕ್ಷರಾದ ಸುಧಾ, ನೀಲಮಣಿ ಹಾಗೂ ಡಿಇಒ ಮೋನಿಕಾ ಅವರುಗಳೇ ಆಪಾಧಿತರು. ಇವರಿಗೆ ತಲಾ 1 ಸಾವಿರ ದಂಡ ವಿಧಿಸಿ ಅದನ್ನು ತಾಪಂ ಇಒ ಮೂಲಕ ವಸೂಲಾತಿ ಮಾಡಬೇಕೆಂದು ಆದೇಶದಲ್ಲಿ ಒಂಬುಡ್ಸ್‌ಮನ್ ಎನ್.ಎಂ.ಶಶಿಕುಮಾರ್ ತಿಳಿಸಿದ್ದಾರೆ.

ಗೋಪಾಲಪುರ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ಹಿಂದಿನ ಪಿಡಿಒ, ಅಧ್ಯಕ್ಷರು ಕಾನೂನು ಬಾಹಿರವಾಗಿ ಕಾಮಗಾರಿ ನಡೆಸಿರುವ ಬಗ್ಗೆ ಕೆ.ಆರ್.ರವೀಂದ್ರ ದೂರು ಸಲ್ಲಿಸಿದ್ದರು.

ಹಿಂದಿನ ಪಿಡಿಒ ಕೋಮಲಾ, ಅಧ್ಯಕ್ಷರಾಗಿದ್ದ ಸುಧಾ ಅವರ ಪುತ್ರಜಿ.ಎಸ್.ಭಾನುಪ್ರಕಾಶ್ ಅವರಿಗೆ ಕಾಮಗಾರಿಗಳನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟಿರುವುದು. ಅವರು ಕಾಮಗಾರಿಗಳಿಗೆ ಸರಬರಾಜುದಾರರಾಗಿ ಹಿಂದಿನ ಪಿಡಿಒ ಭಾನುಪ್ರಕಾಶ್ ಹೆಸರನ್ನು ನಮೂದಿಸಿ ನಂತರ ಕೂಲಿ ಕಾರ್ಮಿಕರು ಎಂದು ನಮೂದಿಸಿರುವುದಾಗಿ ಕೈತಪ್ಪಿನಿಂದ ಆಗಿರುವ ಕೆಲ ಅಂಶಗಳನ್ನು ಮನ್ನಿಸುವಂತೆ ಕೋರಿರುತ್ತಾರೆ.

ಆದರೆ, ದೂರುದಾರ ರವೀಂದ್ರ ಅವರು ಇದು ಕೈ ತಪ್ಪಿನಿಂದ ನಮೂದಿಸಿರುವುದಲ್ಲ. ಕಾಲಂ 11ರಲ್ಲಿ ತಿದ್ದಿ ಬರೆದಿರುವುದಾಗಿ ಸ್ಪಷ್ಟವಾಗಿ ಗೋಚರಿಸುತ್ತದೆ ಹಾಗೂ ಕೆಲವು ದಾಖಲಾತಿಗಳ ನಿರ್ವಹಣೆಯಲ್ಲಿ ಕ್ರಮಬದ್ಧತೆ ಇಲ್ಲದಿರುವುದನ್ನು ಗಮನಿಸಿ ಸುಧಾ ಅವರು ಅಧ್ಯಕ್ಷರಿರುವಾಗ ಹಾಲಿ ಸದಸ್ಯರ ಮಗ ಜಿ.ಎಸ್.ಭಾನುಪ್ರಕಾಶ್ ಸಾಮಗ್ರಿ ಸರಬರಾಜು ಮಾಡಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದರು.

ಪಂಚಾಯತ್‌ ರಾಜ್ ನಿಯಮಗಳ ಪ್ರಕಾರ ಎಲ್ಲವನ್ನೂ ಪರಿಶೀಲಿಸಿ ದೂರುದಾರರು ನೀಡಿರುವ ದೂರಿನನ್ವಯ ಪರಿಶೀಲಿಸಲಾಗಿ ಲೋಪವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ 7 ಮಂದಿಗೆ ತಲಾ ಒಂದು ಸಾವಿರ ದಂಡ ವಿಧಿಸಿ ಅದನ್ನು ತಾಪಂ ಇಒ ಮೂಲಕ ವಸೂಲಿ ಮಾಡುವಂತೆ ಜಿಪಂ ಸಿಇಒಗೆ ಸೂಚಿಸಿದ್ದಾರೆ. ಜೊತೆಗೆ ಮುಂದೆ ಮನರೇಗಾ ಸುತ್ತೋಲೆಗಳ ಅನುಸಾರ ಯಾವುದೇ ಪಂಚಾಯ್ತಿಗಳಲ್ಲೂ ಈ ರೀತಿಯ ಲೋಪ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆದೇಶ ನೀಡಿದ್ದಾರೆ.

Read more Articles on