ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ‘ಮಕ್ಕಳ ಗ್ರಾಮ ಸಭೆ ಹಾಗೂ ಮಹಿಳಾ ಗ್ರಾಮ ಸಭೆ’ಗಳು ಯಶಸ್ವಿಯಾಗಿ ಆಯೋಜನೆಗೊಂಡಿದ್ದು, ರಾಜ್ಯದಲ್ಲಿ ಕ್ರಮವಾಗಿ ಪ್ರಥಮ ಮತ್ತು ಏಳನೇ ಸ್ಥಾನದಲ್ಲಿದ್ದೇವೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.ಬೇಸಿಗೆ ಶಿಬಿರದ ಅಂಗವಾಗಿ ಜಿಲ್ಲೆಯ ೨೧೬ ಗ್ರಾಮ ಪಂಚಾಯ್ತಿಗಳು ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಿ ಶೇಕಡ ೯೦ ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಬೇಸಿಗೆ ಶಿಬಿರದ ಅವಧಿಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ೧೭,೫೦೦ ಮಕ್ಕಳು ನೋಂದಣಿ ಮಾಡಿಕೊಂಡು ಪ್ರಯೋಜನ ಪಡೆದಿರುತ್ತಾರೆ. ಈ ಮೂಲಕ ಜಿಲ್ಲೆಯು ಮತ್ತೊಂದು ಗಮನಾರ್ಹ ಸಾಧನೆ ಮಾಡಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ೨೩೩ ಗ್ರಾಮ ಪಂಚಾಯ್ತಿಗಳಿದ್ದು, ಈಗಾಗಲೇ ೨೧೨ ಗ್ರಾಮ ಪಂಚಾಯ್ತಿಗಳಲ್ಲಿ ಮಹಿಳಾ ಗ್ರಾಮ ಸಭೆಯನ್ನು ಆಯೋಜಿಸಿ ಶೇ.೯೨ ರಷ್ಟು ಪ್ರಗತಿ ಸಾಧಿಸಲಾಗಿದೆ. ಮಹಿಳಾ ಸಶಕ್ತಿಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಮಾರ್ಚ್ ೮ ರಿಂದ ೩೦ ಜೂನ್ ೨೦೨೫ರವರೆಗೆ ಮಹಿಳಾ ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನ ಮತ್ತು ಮಹಿಳಾ ಗ್ರಾಮ ಸಭೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ:ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯನ್ನು ಜಿಲ್ಲೆಯ ಎಲ್ಲಾ ೨೩೩ ಗ್ರಾಮ ಪಂಚಾಯ್ತಿಗಳಲ್ಲಿ ವಿನೂತನವಾಗಿ ಆಚರಿಸುವ ಮೂಲಕ ಗ್ರಾಮ ಪಂಚಾಯ್ತಿ ಆಡಳಿತ ಮತ್ತು ಕಾರ್ಯಚಟುವಟಕೆಗಳಲ್ಲಿ ಸಮುದಾಯದ ಸಹಭಾಗಿತ್ವ, ಭಾಗವಹಿಸುವಿಕೆಯನ್ನು ಉತ್ತೇಜಿಸಲು ಶ್ರಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶ್ರೀ ಉತ್ತೂರಮ್ಮ ದೇವಿಯ 11ನೇ ವರ್ಷದ ಕುಂಭಾಭಿಷೇಕ ಮಹೋತ್ಸವಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಅಂಕನಹಳ್ಳಿಯಲ್ಲಿ ಜೂ.13ರಂದು ಶ್ರೀಉತ್ತೂರಮ್ಮ ದೇವಿಗೆ 11ನೇ ವರ್ಷದ ಕುಂಭಾಭಿಷೇಕ ಮಹೋತ್ಸವ ಹಾಗೂ ವಿಶೇಷ ಮೆರವಣಿಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ದೇವನೂರು ಮಠದ ಶ್ರೀ ಮಹಂತ ಸ್ವಾಮೀಜಿ, ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮಾನಂದನಾಥ ಸ್ವಾಮೀಜಿಗಳು ಭಾಗವಹಿಸುವರು.ಬೆಳಗ್ಗೆಯಿಂದಲೇ ವಿವಿಧ ಪೂಜೆಗಳು, ಹೋಮಗಳ ನಂತರ 10.20ಕ್ಕೆ ಪೂರ್ಣಾಹುತಿ, 10.30ಕ್ಕೆ ಕುಂಭಾಭಿಷೇಕ, ಅಲಂಕಾರ, ಮಹಾನೈವೆದ್ಯ, ಮಹಾಮಂಗಳಾರತಿ, ರಾಷ್ಟ್ರಾಶೀರ್ವಾದ, ತೀರ್ಥಪ್ರಸಾದ ವಿತರಣೆ ಜರುಗಲಿದೆ.
ಇದಕ್ಕು ಮುನ್ನ 101 ಕಳಸದೊಂದಿಗೆ ದೇವಸ್ಥಾನದ ಸುತ್ತಾ ಐದು ಪ್ರದಕ್ಷಿಣೆ, ಮೈಸೂರು ಮಲ್ಲೇಶ್ ರಿಂದ ವೀರಗಾಸೆ ಕುಣಿತ, ದೊಡ್ಡಮುಲಗೂಡು ಕಂಚಿನಮಾರಮ್ಮ, ಬೀರೇಶ್ವರ ಮತ್ತು ಹುಚ್ಚಯ್ಯ ದೇವರುಗಳ ಪೂಜಾ ಕುಣಿತ, ನಂದಿ ಕಂಬ, ಬಸಪ್ಪನ ಸಮೇತ ತಮಟೆ, ವಾದ್ಯಗೋಷ್ಠಿ ಮೆರವಣಿಗೆ ನಡೆಯಲಿದೆ. ನಂತರ ಭಕ್ತರಿಗೆ ಅನ್ನಸಂತರ್ಪಣೆ ಜರುಗಲಿದೆ. ಶಿವಾರ ಉಮೇಶ್ ಅವರಿಂದ ಗೀತ ಗಾಯನ ಜರುಗಲಿದೆ.