ಸಾರಾಂಶ
ಬೆಂಗಳೂರು : ಅಪರಿಚಿತ ವ್ಯಕ್ತಿ ಯುವತಿಗೆ ಕರೆ ಮಾಡಿ ಅಧಿಕ ಲಾಭದಾಸೆ ತೋರಿಸಿ ವಿವಿಧ ಟಾಸ್ಕ್ಗಳ ಹೆಸರಿನಲ್ಲಿ ₹82 ಸಾವಿರ ವರ್ಗಾಯಿಸಿಕೊಂಡು ವಂಚಿಸಿರುವ ಸಂಬಂಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಟನ್ಪೇಟೆ ತುಳಸಿ ತೋಟದ ನಿವಾಸಿ ಪಾಯಲ್ ಜ್ಯೋತಿ (24) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.
ಪಾಯಲ್ ಅವರ ಮೊಬೈಲ್ಗೆ ಇತ್ತೀಚೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ನಾವು ನೀಡುವ ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚಿನ ಲಾಭ ಬರಲಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಪಾಯಲ್ ಅಪರಿಚಿತ ಹೇಳಿದ ಹಾಗೆ ಮೊದಲ ಟಾಸ್ಕ್ಗೆ ₹500, ಎರಡನೇ ಟಾಸ್ಕ್ಗೆ ₹14 ಸಾವಿರ ಸೇರಿದಂತೆ ಒಟ್ಟು ಆರು ಟಾಸ್ಕ್ಗಳಿಗೆ ಒಟ್ಟು ₹82 ಸಾವಿರ ಹಣ ವರ್ಗಾಯಿಸಿದ್ದಾರೆ. ಈ ಟಾಸ್ಕ್ಗಳು ಪೂರ್ಣಗೊಂಡ ಬಳಿಕ ಅಪರಿಚಿತ ವ್ಯಕ್ತಿ ಅಸಲು ಹಣ ಹಾಗೂ ಲಾಭಾಂಶ ಯಾವುದನ್ನೂ ನೀಡದೆ ವಂಚಿಸಿದ್ದಾನೆ. ಈ ಸಂಬಂಧ ಪಾಯಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.