ಮಳವಳ್ಳಿ:
ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಮೃತಪಟ್ಟು ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಸಮೀಪದ ದೊಡ್ಡಕೆರೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಪಟ್ಟಣದ ಗಂಗಾಮತ ಬೀದಿಯ ಬಸಂತ ಕುಮಾರ್ ಪುತ್ರ ಕೇಶವ(12) ಮೃತ ಬಾಲಕ.ಗಂಗಾಮತ ಬೀದಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ಕೇಶವ ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ತನ್ನ ಐವರು ಸಹಪಾಠಿಗಳೊಂದಿಗೆ ದೊಡ್ಡಕೆರೆಯಲ್ಲಿ ಈಜಲು ಹೋಗಿದ್ದಾಗ ಕೇಶವ ಮತ್ತು ಹನುಮಂತು ಇಬ್ಬರು ಬಾಲಕರು ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ.
ಘಟನೆಯಿಂದ ಗಾಬರಿಗೊಂಡ ಇತರೆ ಸಹಪಾಠಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕಿರುಚಾಟ ಕೇಳಿಸಿಕೊಂಡ ಕೆರೆ ಸಮೀಪದ ಅಂಗಡಿಯ ಕೆಲಸಗಾರರು ಇಬ್ಬರು ಬಾಲಕರನ್ನು ರಕ್ಷಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರುವವಷ್ಟರಲ್ಲಿ ಕೇಶವ ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕ ಹನುಮಂತು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಕ್ಷೇತ್ರ ಸಮನ್ವಾಧಿಕಾರಿ ಎಂ.ಕೆ.ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹದೇವು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೋಟೆಲ್ನ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ; ಸಪ್ಲೇಯರ್ ಬಂಧನ
ಶ್ರೀರಂಗಪಟ್ಟಣ: ಖಾಸಗಿ ಹೋಟೆಲ್ನ ಸಪ್ಲೇಯರ್ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿರುವ ಪ್ರಕರಣ ಸಂಬಂಧ ಪಟ್ಟಣದ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜಾಸ್ಥಾನ ಮೂಲದ ಹರೀಶ್ ಪಟ್ಟಣದ ಗಂಜಾಂ ರಸ್ತೆಯ ಹೈವೆ ಸೇತುವೆ ಬಳಿ ಇರುವ ಶರವಣ ಹೋಟೆಲ್ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ. ಈತ ಪುರುಷರು ಮತ್ತು ಮಹಿಳಾ ಶೌಚಾಲಯದ ನಡುವೆ ಇರುವ ಗೋಡೆ ಮೇಲೆ ಮೊಬೈಲ್ ವಿಡಿಯೋ ಆನ್ ಮಾಡಿ ಹೋಟೆಲ್ಗೆ ಬಂದ ಮಹಿಳೆಯರು ಶೌಚಾಲಯದ ಒಳಗೆ ಹೋದ ವೇಳೆ ಅವರ ಖಾಸಗಿ ಭಾಗಗಳನ್ನು ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಪರೀಶೀಲಿಸಿ ಹೋಟೆಲ್ ಮಾಲೀಕನಿಗೆ ದೂರಿದ್ದಾರೆ.
ನಂತರ ಮಾಹಿತಿ ತಿಳಿದ ಪೊಲೀಸರು ಹೋಟೆಲ್ಗೆ ಆಗಮಿಸಿ ಶೌಚಾಲಯದ ಬಳಿ ಮೊಬೈಲ್ ಇಟ್ಟ ವ್ಯಕ್ತಿಯನ್ನು ವಿಚಾರಿಸಿದಾಗ ನಿತ್ಯ ಇಂತಹ ಕೆಲಸ ಮಾಡಿರುವುದು ಬಹಿರಂಗವಾಗಿದೆ. ನಂತರ ಪೋಲಿಸರು ಆರೋಪಿ ಸಪ್ಲೇಯರ್ ಹರೀಶ್ ಹಾಗೂ ಆತನ ಮೊಬೈಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.