ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾರು ರಸ್ತೆ ಬದಿಯ ಮನೆಗೆ ಡಿಕ್ಕಿಯಾಗಿ ಮನೆ, ಬೈಕ್ ಸಂಪೂರ್ಣ ಜಖಂಗೊಂಡಿರುವ ಘಟನೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.ಕಾರಿನಲ್ಲಿ ಹಸುವಿನ ಕರುಗಳನ್ನು ತುಂಬಿಕೊಂಡು ಕೆ.ಆರ್.ಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಅಪ್ರಾಪ್ತ ಸೇರಿದಂತೆ ಇಬ್ಬರು ಯುವಕರು ಇದ್ದರು. ಅಜಾಗರೂಕತೆಯಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದು ತಾಲೂಕಿನ ಚಿನಕುರಳಿ ಗ್ರಾಮದ ಪಶುವೈದ್ಯ ಆಸ್ಪತ್ರೆ ಮುಂಭಾಗದಲ್ಲಿ ಇದ್ದ ದಲಿತ ಸಮುದಾಯದ ಮೀನಾಕ್ಷಮ್ಮರಿಗೆ ಸೇರಿದ ಮನೆಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಮನೆ ಗೋಡೆ ಸಂಪೂರ್ಣ ಕುಸಿದು ಮನೆ ಬಳಿ ನಿಲ್ಲಿಸಿದ ಬೈಕ್ ಮೇಲೆ ಬಿದ್ದು ಜಖಂಗೊಂಡಿದೆ. ಘಟನೆ ವೇಳೆ ಮನೆಯಲ್ಲಿ ಮೀನಾಕ್ಷಮ್ಮ ಸೇರಿದಂತೆ ಮಕ್ಕಳು ಎಲ್ಲರು ಮಲಗಿದ್ದು ಅದೃಷ್ಟಕ್ಕೆ ಯಾವುದೇ ಸಾವುನೋವು ಸಂಭವಿಸಿಲ್ಲ. ಡಿಕ್ಕಿ ಹೊಡೆದ ರಬಸಕ್ಕೆ ಕರುಗಳನ್ನು ತುಂಬಿದ್ದ ಕಾರು ಮೂರು ಪಲ್ಟಿಯಾಗಿದೆ. ಇದರಿಂದಾಗಿ ಕಾರಿನಲ್ಲಿದ್ದ ಹಲವರು ಹಸುವಿನ ಕರು ಒಂದು ಸಾವನ್ನಪ್ಪಿದೆ.ಘಟನೆಯನ್ನು ಕಂಡ ಸ್ಥಳೀಯರು ಆಗಮಿಸಿ ಪೊಲೀಸರಿಗೆ ಮಾಹಿತಿಮುಟ್ಟಿಸಿ ಚಾಲಕರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಸಿ ಇಬ್ಬರು ಯುವಕರು ಸಹ ಮೈಸೂರಿನ ಮುಸ್ಲಿಂ ಸಮುದಾಯದ ಯುವಕರು ಎಂದು ತಿಳಿದು ಬಂದಿದೆ.
ಅಪ್ರಾಪ್ತ ಯುವಕನನ್ನು ಬಿಟ್ಟುಕಳುಹಿಸಿ ಓರ್ವ ಆರೋಪಿಯನ್ನು ಬಂಧಿಸಿ ದೂರು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಬಿಟ್ಟಿರುವ ಆರೋಪಿ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಘಟನೆಯಲ್ಲಿ ವಶಕ್ಕೆ ಪಡೆದಿರುವ 18 ಕರುಗಳನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಪಶುಪಾಲನ ಕೇಂದ್ರಕ್ಕೆ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.
ಪರಿಹಾರಕ್ಕೆ ಒತ್ತಾಯ:ಘಟನೆಯಿಂದಾಗಿ ಮನೆ ಕಳೆದುಕೊಂಡಿರುವ ದಲಿತ ಸಮುದಾಯದ ಮೀನಾಕ್ಷಮ್ಮ ಕುಟುಂಬಸ್ಥರು ಸಂಕಷ್ಟಕ್ಕೆಸಿಲುಕಿದ್ದು ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಮೀನಾಕ್ಷಮ್ಮ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು ಇದೀಗ ನಡೆದ ಘಟನೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಸಂಬಂಧಿಸಿದವರು ಸೂಕ್ತಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ನಿರ್ಮಾಣ ಹಂತದ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವುಮದ್ದೂರು:ನಿರ್ಮಾಣ ಹಂತದಲ್ಲಿದ್ದ ಹಾಸ್ಟೆಲ್ ಕಟ್ಟಡದಿಂದ ಬಿದ್ದು ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಜರುಗಿದೆ.
ತಮಿಳುನಾಡಿನ ಕಾವಾಸ್ (28) ಮೃತಪಟ್ಟ ಕೂಲಿ ಕಾರ್ಮಿಕ.ಶನಿವಾರ ಬೆಳಗ್ಗೆ ತನ್ನ ಸಹಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾಗ ಮೂರನೇ ಹಂತದ ಕಟ್ಟಡದಿಂದ ಬಿದ್ದು ಅಸುನೀಗಿದ್ದಾನೆ. ಕರ್ನಾಟಕ ಗೃಹ ಮಂಡಳಿ ನಾಲ್ಕು ಕೋಟಿ ರು. ವೆಚ್ಚದಲ್ಲಿ ಶಿಕ್ಷಕರ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಬಾಲಕಿರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಕೈಗೊಂಡಿತ್ತು. ಬೆಂಗಳೂರು ಮೂಲದ ಸತ್ಯ ಅವರು ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದರು. ಕಳೆದ ವರ್ಷದ ಸೆಪ್ಟೆಂಬರ್ 30ರಂದು ಶಾಸಕ ಕೆ.ಎಂ.ಉದಯ್ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.ಪ್ರಾರಂಭಿಕ ಹಂತದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲು ಶಿಕ್ಷಕರ ಬಡಾವಣೆಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸ್ಥಳದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ನಿರ್ಮಾಣ ಬದಲು ಕಚೇರಿ ಮಾಡಿಕೊಳ್ಳಿ ಎಂದು ಆಗ್ರಪಡಿಸಿದ್ದರು. ಸಾರ್ವಜನಿಕರ ಆಕ್ಷೇಪಣೆ ಹಿನ್ನೆಲೆಯಲ್ಲಿ ಪುರಸಭೆ ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ನೀಡಲು ನಿರಾಕರಿಸಿತ್ತು. ಆದರೂ ಸಹ ಗುತ್ತಿಗೆದಾರರು ಲೈಸೆನ್ಸ್ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಕಟ್ಟಡ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕರ್ತವ್ಯ ಲೋಪದಆರೋಪದ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.