ಕನ್ನಡಪ್ರಭ ವಾರ್ತೆ ಮಳವಳ್ಳಿ

ದಿನಸಿ ಅಂಗಡಿ ವ್ಯಾಪರಿಯೊಬ್ಬನನ್ನು ದುಷ್ಕರ್ಮಿಗಳು ಬೇರೆಡೆಯಲ್ಲಿ ಕೊಲೆ ಮಾಡಿ ಮನೆಯೊಂದರ ಮುಂದೆ ಬೀಸಾಡಿ ಹೋಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕಮ್ಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದ ಮಂಜು (೪೫) ಮೃತ ದುರ್ದೈವಿ. ಮಂಜು ಬನ್ನೂರು ಪಟ್ಟಣದಲ್ಲಿ ದಿನಸಿ ಅಂಗಡಿ ನಡೆಸುತ್ತಾ ಅಲ್ಲಿಯೇ ವಾಸವಿದ್ದರು. ಫೆ.೮ರಂದು ತಾಲೂಕಿನ ಹುಲ್ಲೇಗಾಲ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಗೃಹ ಪ್ರವೇಶದಲ್ಲಿ ಪಾಲ್ಗೊಂಡು ನಂತರ ದುಗ್ಗನಹಳ್ಳಿಯಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಹೋಗಿದ್ದರು ಎನ್ನಲಾಗಿದೆ.

ಕಳೆದ ರಾತ್ರಿ ದುಷ್ಕರ್ಮಿಗಳು ಮಂಜು ಅವರನ್ನು ಕೊಲೆ ಮಾಡಿ ಅಕ್ಕಮ್ಮನಕೊಪ್ಪಲು ಗ್ರಾಮದ ಮನೆಯ ಜಗುಲಿ ಮೇಲೆ ಎಸೆದು ಪರಾರಿಯಾಗಿದ್ದಾರೆ.

ಫೆ.೯ರಂದು ಬೆಳಗ್ಗೆ ಶವವನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್‌ಪಿ ಯಶ್ವಂತ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮೃತನ ಪತ್ನಿಯ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.