ಸಾರಾಂಶ
ಭಾರತೀನಗರ : ಒಂಟಿ ಮಹಿಳೆ ಇರುವುದನ್ನು ಅರಿತ ದುಷ್ಕರ್ಮಿಗಳು ಹಾಡಹಗಲೇ ಮನೆಗೆ ನುಗ್ಗಿ ಮಹಿಳೆ ಕೈ ಕಾಲು ಕಟ್ಟಿಹಾಕಿ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಸಮೀಪದ ಮೆಳ್ಳಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ಜರುಗಿದೆ.
ಗ್ರಾಮದ ಹೊನ್ನೇಗೌಡರ ಪುತ್ರ ವೆಂಕಟೇಶ್ ಮನೆಯಲ್ಲಿ ಕಳ್ಳತನ ನಡೆದಿದೆ. ವೆಂಕಟೇಶ್ ಅವರ ಪತ್ನಿ ಹರ್ಷಿತ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆಯಲ್ಲಿ ಒಬ್ಬರೇ ಇದ್ದರು. ವೆಂಕಟೇಶ್ ಮತ್ತು ಅವರ ತಾಯಿ ಸಹ ಗದ್ದೆ ಕೆಲಸಕ್ಕಾಗಿ ಹೊರ ಹೋಗಿದ್ದರು. ಇದನ್ನು ಅರಿತ ಇಬ್ಬರು ದುಷ್ಕರ್ಮಿಗಳು ಹೊಂಚುಹಾಕಿ ಬೆಳಗ್ಗೆ 10 ಗಂಟೆ ಸಮಯದಲ್ಲಿ ಮನೆ ಒಳ ನುಗ್ಗಿ ಮುಂದಿನ ಬಾಗಿಲು ಮತ್ತು ಹಿಂದಿನ ಬಾಗಿಲುಗಳನ್ನು ಹಾಕಿಕೊಂಡು ಹರ್ಷಿತಾ ಅವರ ಕೈ-ಕಾಲುಗಳನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ಬೀರುವಿನಲ್ಲಿದ್ದ 1.5 ಲಕ್ಷ ರು. ನಗದು, 25 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಈ ಬಗ್ಗೆ ಹರ್ಷಿತಾ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ತಮ್ಮ ಪತಿ ವೆಂಕಟೇಶರೊಂದಿಗೆ ಆಗಮಿಸಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಮತ್ತು ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಕೆ.ಎಂದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆಯೂ ಸಹ ವೆಂಕಟೇಶ್ ಅವರ ಪಕ್ಕದ ಕರಿಯಪ್ಪ ಮನೆಯಲ್ಲೂ ಕಳ್ಳತನವಾಗಿತ್ತು. ಈ ಘಟನೆಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಳ್ಳಿಗೆ ಬೀಟ್ ಪೊಲೀಸರನ್ನು ಹೆಚ್ಚು ನಿಯೋಜಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.