ಸಾರಾಂಶ
ಬೈಕ್ನಲ್ಲಿ ತೆರಳುವಾಗ ಸಮೀಪದ ಎಚ್.ಬಸಾಪುರ ಮತ್ತು ಗುಂಡಾಪುರ ಗೇಟ್ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.
ಹಲಗೂರು : ಬೈಕ್ನಲ್ಲಿ ತೆರಳುವಾಗ ಸಮೀಪದ ಎಚ್.ಬಸಾಪುರ ಮತ್ತು ಗುಂಡಾಪುರ ಗೇಟ್ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.
ದಳವಾಯಿ ಕೋಡಿಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ (60) ಮೃತಪಟ್ಟವರು. ಕಳೆದ ಶುಕ್ರವಾರ ರಾತ್ರಿ ಕಾರ್ಯ ನಿಮಿತ್ತವಾಗಿ ತನ್ನ ದ್ವಿಚಕ್ರ ವಾಹನದಲ್ಲಿ ಹಲಗೂರಿಗೆ ಬಂದಿದ್ದ ಮಲ್ಲಿಕಾರ್ಜುನ ಸ್ವಾಮಿ, ಹಲಗೂರಿನಲ್ಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ಹಿಂದುರುಗುತ್ತಿದ್ದಾಗ ಸಮೀಪದ ಎಚ್.ಬಸಾಪುರ ಮತ್ತು ಗುಂಡಾಪುರ ಗೇಟ್ ಮಧ್ಯೆ ಇರುವ ಖಾಸಗಿ ಪೆಟ್ರೋಲ್ ಬಂಕ್ ಬಳಿ ಅಯತಪ್ಪಿ ಬೈಕ್ ನಿಂದ ಕೆಳಗೆ ಬಿದ್ದಿದ್ದರು.
ಅಪಘಾತದಲ್ಲಿ ತೀವ್ರ ಗಾಯಗೊಂಡ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿಯಲ್ಲೇ ಕಾರು ಬೆಂಕಿಗಾಹುತಿ..!
ಮಂಡ್ಯ : ಚಲಿಸುತ್ತಿದ್ದ ವೇಳೆ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೆದ್ದಾರಿಯಲ್ಲೆ ಹೊತ್ತಿ ಉರಿದು ಭಸ್ಮವಾದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಎಪಿಎಂಸಿ ಕಚೇರಿ ಬಳಿ ನಡೆದಿದೆ.
ಮದನ್ ಎಂಬುವರಿಗೆ ಸೇರಿದ ಕಾರು ಬೆಂಕಿಗೆ ಆಹುತಿಯಾಗಿದ್ದು, ಕೆಂಗೇರಿಯಿಂದ ಕುಶಾಲನಗರ ಕಡೆ ಹೊರಟಿದ್ದ ಮದನ್ ಕಾರಿನಲ್ಲಿ ಸುಟ್ಟವಾಸನೆ ಬರಲಾರಂಭಿಸಿತ್ತು. ಮದನ್ ಹಾಗೂ ಅವರ ಸ್ನೇಹಿತ ಕಾರಿನಿಂದ ಇಳಿದು ನೋಡುವಾಗ ಬೆಂಕಿ ಹೊತ್ತಿಕೊಂಡಿತು. ನೋಡ ನೋಡುತ್ತಿದ್ದಂತೆ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿತು.
ಕೂಡಲೇ ಅಗ್ನಿಶಾಮಕ ಇಲಾಖೆಯವರಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.