ಸಾರಾಂಶ
ಬೆನ್ನು ನೋವಿನ ಕಾರಣಕ್ಕೆ ಆಸ್ಪತ್ರೆ ಸೇರಿದ್ದ ಕೊಲೆ ಆರೋಪಿ ನಟ ದರ್ಶನ್ ಬುಧವಾರ ಬಿಜಿಎಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ತಮ್ಮ ಪುತ್ರ ವಿನೀಶ್ ಹಾಗೂ ನಟ ಧನ್ವೀರ್ ಜತೆಗೂಡಿ ದರ್ಶನ್ ಆಸ್ಪತ್ರೆಯಿಂದ ತೆರಳಿದರು.
ಬೆಂಗಳೂರು : ಬೆನ್ನು ನೋವಿನ ಕಾರಣಕ್ಕೆ ಆಸ್ಪತ್ರೆ ಸೇರಿದ್ದ ಕೊಲೆ ಆರೋಪಿ ನಟ ದರ್ಶನ್ ಬುಧವಾರ ಬಿಜಿಎಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ತಮ್ಮ ಪುತ್ರ ವಿನೀಶ್ ಹಾಗೂ ನಟ ಧನ್ವೀರ್ ಜತೆಗೂಡಿ ದರ್ಶನ್ ಆಸ್ಪತ್ರೆಯಿಂದ ತೆರಳಿದರು.
ಆಸ್ಪತ್ರೆಯಿಂದ ನೇರವಾಗಿ ಪತ್ನಿ ವಿಜಯಲಕ್ಷ್ಮೀಯವರ ಹೊಸಕೆರೆಹಳ್ಳಿಯಲ್ಲಿರುವ ನಿವಾಸಕ್ಕೆ ದರ್ಶನ್ ತೆರಳಿದ್ದಾರೆ. ಧನ್ವೀರ್ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಕುಂಟುತ್ತಲೇ ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ಜೊತೆ ಮಗ ವಿನೀಶ್ ಕೂಡ ಇದ್ದ. ನಟ ಧನ್ವಿರ್ ಅವರೇ ಕಾರು ಚಾಲನೆ ಮಾಡಿ ದರ್ಶನ್ರನ್ನು ಕರೆದುಕೊಂಡು ಹೊರಟರು.
ಬೆನ್ನುನೋವಿನ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಉದ್ದೇಶದಿಂದ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜಾಮೀನು ಮಂಜೂರಾದ ಮೇಲೆ ಇದೀಗ ದರ್ಶನ್ ಅವರು ಶಸ್ತ್ರಚಿಕಿತ್ಸೆ ಮಾಡದೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಸರ್ಜರಿ ಮಾಡಿಸಿಕೊಳ್ಳದೆ ಹೋದರೆ ಪಾರ್ಶ್ವವಾಯು ಆಗುವ ಸಂಭವವಿದೆ ಎಂದು ದರ್ಶನ್ ಪರ ವಕೀಲರು ಈ ಮೊದಲು ವಾದ ಮಂಡಿಸಿದ್ದರಿಂದ ಈಗ ಸರ್ಜರಿ ಮಾಡದೇ ದರ್ಶನ್ ಹೇಗೆ ಡಿಸ್ಚಾರ್ಜ್ ಆದರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ. ದರ್ಶನ್ ಮನೆಯಲ್ಲಿಯೇ ಫಿಸಿಯೋಥೆರಪಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದು, ಫಿಸಿಯೋಥೆರಪಿಸ್ಟ್ ಒಬ್ಬರು ಪ್ರತಿದಿನ ಮನೆಗೆ ಬಂದು ಫಿಸಿಯೋಥೆರಪಿ ಕೊಟ್ಟು ಹೋಗುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ದರ್ಶನ್ ಮತ್ತು ಸಹಚರರಿಗೆ ಶುಕ್ರವಾರವಷ್ಟೇ ಜಾಮೀನು ಮಂಜೂರಾಗಿತ್ತು.