ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ನಟಿ ಕೃಷಿ ತಾಪಂಡ ಅವರಿಗೆ ಮೆಸೇಜ್ ಕಳುಹಿಸಿ ಆಕೆಯ ಮನೆಯಲ್ಲೇ ಸ್ನೇಹಿತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು : ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ನಟಿ ಕೃಷಿ ತಾಪಂಡ ಅವರಿಗೆ ಮೆಸೇಜ್ ಕಳುಹಿಸಿ ಆಕೆಯ ಮನೆಯಲ್ಲೇ ಸ್ನೇಹಿತರೊಬ್ಬರು ಆತ್ಮ*ತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಗಿರಿನಗರದ ನಿವಾಸಿ ವೈಶಾಖ್ (45) ಮೃತ ವ್ಯಕ್ತಿ. ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟ್ನ ಕೃಷಿ ಅವರ ಫ್ಲ್ಯಾಟ್ನಲ್ಲಿ ಬುಧವಾರ ರಾತ್ರಿ ನೇಣು ಬಿಗಿದುಕೊಂಡು ವೈಶಾಖ್ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮ*ತ್ಯೆಗೂ ಮುನ್ನ ಗೆಳತಿಗೆ ಸಂದೇಶ ಕಳುಹಿಸಿದ್ದರು. ಆ ವೇಳೆ ನೆಲಮಂಗಲ ಸಮೀಪ ಖಾಸಗಿ ಸಂಸ್ಥೆಯಲ್ಲಿ ಪ್ರಕೃತಿ ಚಿಕಿತ್ಸೆಗೆ ದಾಖಲಾಗಿದ್ದ ಕೃಷಿ ಮನೆಗೆ ಬಂದಿದ್ದಾರೆ. ಆದರೆ ನಟಿ ಮನೆಗೆ ಮರಳುವ ವೇಳೆಗೆ ವೈಶಾಖ್ ಮೃತಪಟ್ಟಿದ್ದರು. ಆನಂತರ ಪೊಲೀಸರಿಗೆ ಕೃಷಿ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಾಹಿತ ಕೃಷಿ ಸ್ನೇಹ
ಗಿರಿನಗರ ಸಮೀಪ ತಮ್ಮ ಪತ್ನಿ ಮೇಘನಾ, ಮಗ ಹಾಗೂ ಪೋಷಕರ ಜತೆ ವೈಶಾಖ್ ನೆಲೆಸಿದ್ದರು. ಆಟೋಮೊಬೈಲ್ಸ್ ವ್ಯವಹಾರ ನಡೆಸುತ್ತಿದ್ದ ಅವರು, ವೀರಭದ್ರನಗರದಲ್ಲಿ ಮಳಿಗೆ ಸಹ ಇಟ್ಟಿದ್ದರು. 6 ವರ್ಷಗಳ ಹಿಂದೆ ಅವರಿಗೆ ನಟಿ ಕೃಷಿ ಪರಿಚಯವಾಗಿತ್ತು. ತರುವಾಯ ಇಬ್ಬರು ‘ಆತ್ಮೀಯ’ ಒಡನಾಡಿಗಳಾಗಿದ್ದರು. ಇದೇ ಸ್ನೇಹವು ವೈಶಾಖ್ ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗಿತ್ತು. ಈ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿ ಜತೆ ಮುನಿಸಿಕೊಂಡು ಅವರು ಮನೆ ತೊರೆದಿದ್ದರು. ಕಳೆದೊಂದು ತಿಂಗಳಿಂದ ಗೆಳೆತಿ ಕೃಷಿ ಜತೆ ಅವರು ನೆಲೆಸಿದ್ದರು. ಅನಿರೀಕ್ಷಿತವಾಗಿ ಬದುಕಿನಲ್ಲಿ ಎದುರಾದ ಸಮಸ್ಯೆಗಳು ಅವರನ್ನು ಕಂಗೆಡಿಸಿದ್ದವು. ಇದರಿಂದ ವೈಶಾಖ್ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ.
ಪತ್ನಿ ಹಾಗೂ ಗೆಳತಿಗೆ ಮೆಸೇಜ್
ಇನ್ನೊಂದೆಡೆ ತಮ್ಮ ಖಾಸಗಿ ಬದುಕಿನಲ್ಲಿ ನೊಂದಿದ್ದ ಕೃಷಿ, ಮಾನಸಿಕದೊತ್ತಡ ನಿವಾರಣೆಗೆ ನೆಲಮಂಗಲದ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಪ್ರಕೃತಿ ಚಿಕಿತ್ಸೆಗೆ ದಾಖಲಾಗಿದ್ದರು. 4 ದಿನಗಳಿಂದ ಸ್ನೇಹಿತೆ ಮನೆಯಲ್ಲಿ ಏಕಾಂಗಿಯಾಗಿದ್ದ ವೈಶಾಖ್, ವೈಯಕ್ತಿಕ ಸಮಸ್ಯೆಗಳಿಂದ ಜಿಗುಪ್ಸೆಗೊಂಡು ಆತ್ಮ*ತ್ಯೆಗೆ ನಿರ್ಧರಿಸಿದ್ದಾರೆ. ತಮ್ಮ ಪತ್ನಿ ಮೇಘನಾ ಅವರಿಗೆ ಬುಧವಾರ ರಾತ್ರಿ 8 ಗಂಟೆಗೆ ಮೆಸೇಜ್ ಮಾಡಿ ಮಗನ ಬಗ್ಗೆ ಅವರು ವಿಚಾರಿಸಿಕೊಂಡಿದ್ದಾರೆ. ಆನಂತರ ತಮ್ಮ ಸ್ನೇಹಿತೆ ಕೃಷಿಗೆ ಅವರಿಗೆ ರಾತ್ರಿ 9 ಗಂಟೆಗೆ ವೈಶಾಖ್ ಮೆಸೇಜ್ ಮಾಡಿದ್ದಾರೆ. ಇದರಲ್ಲಿ ತನಗೆ ಜೀವನ ಸಾಕಾಗಿದೆ. ನಾನು ಆತ್ಮ*ತ್ಯೆ ಮಾಡಿಕೊಳ್ಳುವುದಾಗಿ ಅವರು ನೋವು ತೋಡಿಕೊಂಡಿದ್ದರು. ಈ ಸಂದೇಶ ನೋಡಿ ಕೃಷಿಗೆ ಆತಂಕವಾಗಿದೆ. ಆಗ ಸ್ನೇಹಿತನಿಗೆ ಮಮತೆಯಿಂದ ಮಾತನಾಡಿ ಸಮಾಧಾನಗೊಳಿಸಲು ನಟಿ ಯತ್ನಿಸಿದ್ದಾರೆ. ಆದರೆ ವೈಶಾಖ್ ತಣ್ಣಿದಿಲ್ಲ. ಇದಾದ ಬಳಿಕ ಗೆಳೆಯನಿಗೆ ನಾನು ಮನೆಗೆ ಬರುತ್ತೇನೆ. ಇಬ್ಬರು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗೋಣ. ಎಲ್ಲ ಸಮಸ್ಯೆಗಳು ಪರಿಹಾರವಾಗಲಿದೆ ಎಂದಿದ್ದಾರೆ. ಇದಾದ ನಂತರ ಅವರ ಮೆಸೇಜ್ಗಳಿಗೆ ವೈಶಾಖ್ ಪ್ರತಿಕ್ರಿಯಿಸಿಲ್ಲ. ಆಗ ಆತಂಕಗೊಂಡ ಕೃಷಿ, ತಕ್ಷಣವೇ ನೆಲಮಂಗಲದಿಂದ ಹೊರಟು ರಾತ್ರಿ 12 ಗಂಟೆಗೆ ಮನೆಗೆ ಬಂದಿದ್ದಾರೆ. ಫ್ಲ್ಲಾಟ್ನ ಬೀಗ ತೆರೆದು ಒಳ ಪ್ರವೇಶಿಸಿದಾಗ ನೇಣಿನ ಕುಣಿಕೆಯಲ್ಲಿ ಗೆಳೆಯನ ಮೃತದೇಹ ಕಂಡು ಕೃಷಿ ಆಘಾತಗೊಂಡಿದ್ದಾರೆ. ಕೆಲ ಹೊತ್ತು ಬಳಿಕ ಸವಾರಿಸಿಕೊಂಡು ತಮ್ಮ ಆಪ್ತ ಸ್ನೇಹಿತರು ಹಾಗೂ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸಹಜ ಸಾವು ಪ್ರಕರಣ ದಾಖಲು
ಈ ಘಟನೆ ಸಂಬಂಧ ಮೃತರ ಪತ್ನಿ ಮೇಘನಾ ದೂರು ಆಧರಿಸಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ. ಆದರೆ ತಮ್ಮ ದೂರಿನಲ್ಲಿ ವೈಶಾಖ್ ಸಾವಿಗೆ ಯಾರ ಮೇಲೂ ಮೃತರ ಕುಟುಂಬದವರು ಆಪಾದನೆ ಮಾಡಿಲ್ಲ. ಅಲ್ಲದೆ ಶಂಕೆ ಸಹ ವ್ಯಕ್ತಪಡಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗೆಳತಿ ಪರವಾಗಿ ಜೈಲು ಸೇರಿದ್ದ
ಕೆಲ ತಿಂಗಳ ಹಿಂದೆ ಕೃಷಿ ತಾಪಂಡ ಹಾಗೂ ಮಾಜಿ ಸ್ನೇಹಿತ ಚಲನಚಿತ್ರ ನಿರ್ಮಾಪಕ ಅರವಿಂದ್ ರೆಡ್ಡಿ ಮಧ್ಯೆ ವಿವಾದವಾಗಿತ್ತು. ಆಗ ತಮಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಎಚ್ಎಎಲ್ ಠಾಣೆಗೆ ವೈಶಾಖ್ ವಿರುದ್ಧ ರೆಡ್ಡಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ವೈಶಾಖ್ ಬಂಧನವಾಗಿತ್ತು.
ಕೃಷಿ ಸ್ನೇಹದಿಂದ ದೂರ-ಪತ್ನಿ ಬೇಸರ
ನಟಿ ಕೃಷಿ ಜತೆ ಸ್ನೇಹವಾದ ಬಳಿಕ ಕುಟುಂಬದಿಂದ ವೈಶಾಖ್ ದೂರವಾದರು. ಮನೆಗೆ ಕೂಡ ಸರಿಯಾಗಿ ಬರುತ್ತಿಲ್ಲ. ಕೆಲ ದಿನಗಳಿಂದ ಅವರು ಪ್ರತ್ಯೇಕವಾಗಿಯೇ ನೆಲೆಸಿದ್ದರು ಎಂದು ಪೊಲೀಸರಿಗೆ ಮೃತರ ಪತ್ನಿ ಮೇಘನಾ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಮೃತನ ಅಂತ್ಯಕ್ರಿಯೆ
ಚಾಮರಾಜಪೇಟೆ ಸಮೀಪದ ಹಿಂದೂ ರುದ್ರಭೂಮಿಯಲ್ಲಿ ವೈಶಾಖ್ ಪಾರ್ಥಿವ ಶರೀರ ಅಂತ್ಯಕ್ರಿಯೆಯನ್ನು ಮೃತನ ಕುಟುಂಬದವರು ನೆರೆವೇರಿಸಿದರು. ಈ ವೇಳೆ ನಟಿ ಕೃಷಿ ತಾಪಂಡ, ಸ್ನೇಹಿತರು ಇದ್ದರು.
ಗೆಳೆಯನ ನೆನೆದು ಕಣ್ಣೀರಿಟ್ಟ ಕೃಷಿ
ತಮ್ಮ ಆಪ್ತ ಸ್ನೇಹಿತನ ಮೃತದೇಹದ ಬಳಿ ಕೃಷಿ ತಾಪಂಡ ಕಣ್ಣೀರಿಟ್ಟು ಗೋಳಾಡಿದರು. ಇತ್ತ ಮೃತನ ಪತ್ನಿ, ಪುತ್ರ ಹಾಗೂ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತು.
