ಸಾರಾಂಶ
ಕೆ.ಎಂ.ದೊಡ್ಡಿ : ಅಪರಿಚಿತ ಕಾರು ಡಿಕ್ಕಿಯಾಗಿ ಇಬ್ಬರು ಪಾದಚಾರಿಗಳು ಮೃತಪಟ್ಟಿರುವ ಘಟನೆ ಮಣಿಗೆರೆ ಗ್ರಾಮದ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ನಡೆದಿದೆ. ಗ್ರಾಮದ ಮರಿಸ್ವಾಮಿ (50), ತಿಬ್ಬಯ್ಯ(60) ಮೃತಪಟ್ಟ ದುರ್ದೈವಿಗಳು.
ಗ್ರಾಮದಲ್ಲಿ ಭಾನುವಾರ ರಾತ್ರಿ 8 ಗಂಟೆ ಸಮಯದಲ್ಲಿ ಇಬ್ಬರು ಜೊತೆಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ಮಳವಳ್ಳಿ ಕಡೆಯಿಂದ ಅತಿ ವೇಗವಾಗಿ ಬಂದ ಅಪರಿಚಿತ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ರಕ್ತಸ್ರಾವಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಅಪರಿಚಿತ ಕಾರನ್ನು ಹಿಂಬಾಲಿಸಿಕೊಂಡು ಹೋದರೂ ಹೊಸ ಕಾರು ಯಾವುದೇ ನಂಬರ್ ಪ್ಲೇಟ್ ಹಾಕಿರಲಿಲ್ಲ. ಇದರಿಂದ ಕಾರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ತೀವ್ರ ರಕ್ತಸ್ರಾವಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ಸ್ಥಳೀಯರು ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರುದಾರರಿಗೆ ಒಪ್ಪಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ಜಿಲ್ಲಾ ಎಸ್ಪಿ ಎಸ್.ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಅಪಘಾತ ಸ್ಥಳವನ್ನು ಪರಿಶೀಲಿಸಿದರು. ಅಪಘಾತ ನಡೆಸಿರುವ ಕಾರನ್ನು ಪತ್ತೆ ಮಾಡಲು ಸೂಚನೆಗಳನ್ನು ನೀಡಿದರು. ಮುಂದೆ ಇಂತಹ ಅಪಘಾತಗಳನ್ನು ಸಂಭವಿಸಿದಂತೆ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚಿಸಿದರು. ಈ ವೇಳೆ ಠಾಣೆ ಇನ್ಸ್ ಪೆಕ್ಟರ್ ಎಸ್.ಆನಂದ್ ಇದ್ದರು.
ಕಾವೇರಿ ನದಿಯಲ್ಲಿ ಮುಳುಗಿ ಟಿವಿಎಸ್ ನೌಕರ ಸಾವು
ಶ್ರೀರಂಗಪಟ್ಟಣ: ತಾಲೂಕಿನ ಬಲಮುರಿ ಪ್ರವಾಸಿ ತಾಣ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಟಿವಿಎಸ್ ನೌಕರ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ಗ್ರಾಮದ ನಿವಾಸಿ ಎಂ.ಪ್ರವೀಣ್ (22) ಸಾವನಪ್ಪಿರುವ ನೌಕರ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಸಾಪುರ ಗ್ರಾಮದ ಮೂಲ ನಿವಾಸಿ ಪ್ರವೀಣ್ ಕಡಕೊಳದ ಟಿವಿಎಸ್ ಕಾರ್ಖಾನೆಯಲ್ಲಿ ನೌಕರರನಾಗಿದ್ದನು. ಈತ ತನ್ನ ಆರು ಜನ ಸ್ನೇಹಿತರ ಜೊತೆ ಬಲಮುರಿ ಪ್ರವಾಸಿ ತಾಣಕ್ಕೆ ಬಂದು ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಕೆಆರ್ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.