ಸಾರಾಂಶ
ಫೆ.18ರ ತಡರಾತ್ರಿ ಶ್ರೀರಂಗಪಟ್ಟಣ- ಕೆಆರ್ ಪೇಟೆ ಮುಖ್ಯ ರಸ್ತೆ ಮಾರ್ಗದಲ್ಲಿ ಬರುವ ಹರವು ಗ್ರಾಪಂ ವ್ಯಾಪ್ತಿಯ ಎಲೆಕೆರೆ ಹ್ಯಾಂಡ್ ಪೋಸ್ಟ್ ವೃತ್ತದ ಬಳಿ ಮಾರುತಿ 800 ಕಾರ್ನಲ್ಲಿ 2040 ಕೆ.ಜಿ ಒಣ ಗಾಂಜಾವನ್ನು ಸಾಗಿಸುತ್ತಿದ್ದ ಯೂನಸ್ ಬಿನ್ ಅಜ್ಮಲ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು
ಶ್ರೀರಂಗಪಟ್ಟಣ : ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಪಟ್ಟಣದ ಅಬಕಾರಿ ಪೊಲೀಸರು ಬಂಧಿಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಫೆ.18ರ ತಡರಾತ್ರಿ ಶ್ರೀರಂಗಪಟ್ಟಣ- ಕೆಆರ್ ಪೇಟೆ ಮುಖ್ಯ ರಸ್ತೆ ಮಾರ್ಗದಲ್ಲಿ ಬರುವ ಹರವು ಗ್ರಾಪಂ ವ್ಯಾಪ್ತಿಯ ಎಲೆಕೆರೆ ಹ್ಯಾಂಡ್ ಪೋಸ್ಟ್ ವೃತ್ತದ ಬಳಿ ಮಾರುತಿ 800 ಕಾರ್ನಲ್ಲಿ 2040 ಕೆ.ಜಿ ಒಣ ಗಾಂಜಾವನ್ನು ಸಾಗಿಸುತ್ತಿದ್ದ ಪಾಂಡವಪುರ ಟೌನ್ ನಿವಾಸಿ ಯೂನಸ್ ಬಿನ್ ಅಜ್ಮಲ್(23) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಶ್ರೀರಂಗಪಟ್ಟಣ ವಲಯದ ಅಬಕಾರಿ ನಿರೀಕ್ಷಕರಾದ ಪ್ರಪುಲ್ಲ ಚಂದ್ರ ವೈ.ಜೆ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಶಿವಣ್ಣ, ಅಬಕಾರಿ ಹೆಡ್ ಕಾನ್ಸ್ಟೇಬಲ್ ರಾಮು, ಹಾಗೂ ವಾಹನ ಚಾಲಕರಾದ ನಾಗರಾಜು ಮತ್ತು ಹರವು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಭಾಗವಹಿಸಿದ್ದರು.
ವೃದ್ಧೆ ಇದ್ದ ಗುಡಿಸಲಿಗೆ ಬೆಂಕಿ ನಷ್ಟ
ಶ್ರೀರಂಗಪಟ್ಟಣ: ಪಟ್ಟಣ ಪುರಸಭಾ ವ್ಯಾಪ್ತಿಯ ವಾರ್ಡ್ ನಂ.1ರ ಬಡಾವಣೆಯಲ್ಲಿ ವಾಸವಿದ್ದ ವಯೋವೃದ್ಧೆಯ ಗುಡಿಸಿಲಿಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಮನೆ ಸುಟ್ಟು ಭಸ್ಮವಾಗಿದೆ.
ಸುಮಾರು 70 ವರ್ಷದ ವಯೋವೃದ್ಧೆ ದೇವಮ್ಮ ಒಬ್ಬರೇ ಗುಡಿಸಲಿನಲ್ಲಿ ವಾಸವಿದ್ದರು. ಬೆಂಕಿಯಿಂದ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಆಹುತಿಯಾಗಿವೆ. ಅಕ್ಕ ಪಕ್ಕದ ಮನೆಯವರು ಉರಿಯುವ ಗುಡಿಸಲಿಗೆ ಬಿಂದಿಗೆ ಬಕೆಟ್ನಲ್ಲಿ ನೀರು ತಂದು ಹಾಕಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಸದ್ಯ ಮನೆಯಿಂದ ಹೊರಗೆ ಬಂದಿದ್ದ ವೃದ್ಧೆಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಪುರಸಭೆ ಹಾಗೂ ಸದಸ್ಯರು ಮನೆ ಕಳೆದುಕೊಂಡಿರುವ ವೃದ್ಧೆಗೆ ಪುನರ್ವಸತಿಗೆ ಸಹಾಯ ಮಾಡಬೇಕೆಂದು ಸ್ಥಳೀಯ ಪುರ ಜನರು ಒತ್ತಾಯಿಸಿದ್ದಾರೆ.