ಸಾರಾಂಶ
ಬೆಂಗಳೂರು : ಕ್ಷುಲ್ಲಕ ಕಾರಣಕ್ಕಾಗಿ ಕರ್ತವ್ಯ ನಿರತ ಬಿಎಂಟಿಸಿ ಬಸ್ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿ ನಿವಾಸಿ ಹೇಮಂತ್ ಬಂಧಿತ. ಆರೋಪಿಯು ಅ.18ರಂದು ಟಿನ್ ಫ್ಯಾಕ್ಟರಿ ಬಳಿ ಬಿಎಂಟಿಸಿ ಬಸ್ ನಿರ್ವಾಹಕ ಸಂಗಪ್ಪ ಚಿತ್ತಲಗಿ ಮೇಲೆ ಹಲ್ಲೆ ಮಾಡಿದ್ದ. ಆರೋಪಿಯು ಬಿಕಾಂ ಪದವೀಧರನಾಗಿದ್ದು, ಮಾರತಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಎಲೆಕ್ಟ್ರಾನಿಕ್ ಸಿಟಿ ಬಿಎಂಟಿಸಿ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಗಪ್ಪ ಅ.18ರಂದು ಮಧ್ಯಾಹ್ನ ಟಿನ್ ಫಾಕ್ಟರಿ ಬಳಿ ಬಸ್ ನಿಲ್ಲಿಸಿಕೊಂಡು ಚಾಲಕನ ಜತೆಗೆ ಊಟ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬಸ್ ಏರಿದ ಹೇಮಂತ್ ಕಲ್ಲಿನಿಂದ ನಿರ್ವಾಹಕ ಸಂಗಪ್ಪನ ತಲೆಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸಾರ್ವಜನಿಕರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಮಾಡಿದಾಗ, ಕೆಲ ದಿನಗಳ ಹಿಂದೆ ಬಸ್ ಪಾಸ್ ವಿಚಾರವಾಗಿ ನಿರ್ವಾಹಕ ಸಂಗಪ್ಪ ಜತೆಗೆ ಹೇಮಂತ್ ಕಿರಿಕ್ ಮಾಡಿಕೊಂಡಿದ್ದ. ಇದನ್ನೇ ಮನಸ್ಸಿನಲ್ಲಿ ಇರಿಸಿಕೊಂಡು ಅಂದು ಊಟ ಮಾಡುತ್ತಿದ್ದ ನಿರ್ವಾಹನ ಸಂಗಪ್ಪ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆರೋಪಿಯ ತಂದೆ ಸಹ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.