ಸಾರಾಂಶ
ಬೆಂಗಳೂರು : ರಸ್ತೆ ಬದಿ ನಿಲುಗಡೆ ಮಾಡಿದ್ದ ಆಟೋ ರಿಕ್ಷಾಗೆ ಹಿಂದಿನಿಂದ ಕ್ರೇನ್ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಆಟೋ ಚಾಲಕನ ಮೇಲೆ ಆ ಕ್ರೇನ್ ವಾಹನದ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಶೇಷಾದ್ರಿ ರಸ್ತೆಯ ಮೌರ್ಯ ಜಂಕ್ಷನ್ನ ಗಾಂಧಿ ಪ್ರತಿಮೆ ಬಳಿ ನಡೆದಿದೆ.
ಮಾಗಡಿ ರಸ್ತೆ ಹೇರೋಹಳ್ಳಿ ನಿವಾಸಿ ವಿನೋದ್ಕುಮಾರ್(35) ಮೃತ ಆಟೋ ಚಾಲಕ. ಗುರುವಾರ ಮುಂಜಾನೆ ಸುಮಾರು 6.30ಕ್ಕೆ ಈ ಘಟನೆ ನಡೆದಿದೆ. ಈ ಸಂಬಂಧ ಕ್ರೇನ್ ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಆಟೋ ಚಾಲಕ ವಿನೋದ್ ಕುಮಾರ್ ಹಲವು ವರ್ಷಗಳಿಂದ ಕುಟುಂಬದ ಜತೆಗೆ ಹೋರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮುಂಜಾನೆ ಶೇಷಾದ್ರಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ಆಟೋ ನಿಲ್ಲಿಸಿಕೊಂಡು ಸ್ನೇಹಿತರ ಜತೆಗೆ ಟೀ ಕುಡಿದಿದ್ದಾರೆ. ಸ್ನೇಹಿತರು ಹೊರಟ ಬಳಿಕ ವಿನೋದ್ ಕುಮಾರ್ ತನ್ನ ಆಟೋ ಒಳಗೆ ಕುಳಿತುಕೊಂಡಿದ್ದಾರೆ. ಈ ವೇಳೆ ರೇಸ್ಕೋರ್ಸ್ ರಸ್ತೆ ಕಡೆಯಿಂದ ವೇಗವಾಗಿ ಬಂದ ಕ್ರೇನ್ ವಾಹನ ಹಿಂದಿನಿಂದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ವಿನೋದ್ ಕುಮಾರ್ ಮೇಲೆ ಕ್ರೇನ್ ವಾಹನದ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತ ಎಸೆಗಿದ ಕ್ರೇನ್ ವಾಹನದ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.