ಸಾರಾಂಶ
ದಂಡ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಮೇಲೆ ಬ್ಯಾಂಡೇಜ್ ಅಂಟಿಸಿಕೊಂಡು ಓಡಾಡುತ್ತಿದ್ದ ಸವಾರನ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಮೇಲೆ ಬ್ಯಾಂಡೇಜ್ ಅಂಟಿಸಿಕೊಂಡು ಓಡಾಡುತ್ತಿದ್ದ ಸವಾರನ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಉತ್ತರಹಳ್ಳಿ ಮುಖ್ಯರಸ್ತೆಯ ಗೌಡನಪಾಳ್ಯ ಸರ್ಕಲ್ನಲ್ಲಿ ಗುರುವಾರ ಮಧ್ಯಾಹ್ನ ಡಿಯೋ ದ್ವಿಚಕ್ರ ವಾಹನವೊಂದು ಬಂದಿದೆ. ಈ ವಾಹನದ ಹಿಂಬದಿ ನಂಬರ್ ಪ್ಲೇಟ್ನ ನೋಂದಣಿ ಸಂಖ್ಯೆಯ ಕೊನೆಯ ಸಂಖ್ಯೆ ಕಾಣದಂತೆ ಹ್ಯಾಂಡಿ ಪ್ಲಾಸ್ಟ್ ಅಂಟಿಸಿರುವುದು ಕಂಡು ಬಂದಿದೆ.
ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು, ದ್ವಿಚಕ್ರ ವಾಹನ ಹಾಗೂ ಅದರ ಸವಾರ ನವೀನ್ ಎಂಬಾತನನ್ನು ವಶಕ್ಕೆ ಪಡೆದು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊಲೀಸರು ಸವಾರ ನವೀನ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.