ಶ್ರೀರಂಗಪಟ್ಟಣ:
ಲಾಂಗು, ಮಚ್ಚುಗಳಿಂದ ಅಟ್ಟಾಡಿಸಿ ಮುಸ್ಲಿಂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಟೌನ್ ವ್ಯಾಪ್ತಿಯ ಗಂಜಾಂ ನಲ್ಲಿ ನಡೆದಿದೆ.ಮೈಸೂರು ಮೂಲದ ಮಹಮದ್ ಸೋಯಬ್ (22) ಕೊಲೆಯಾದ ಯುವಕ.
ಮೈಸೂರಿನಿಂದ ಮೂರು ಬೈಕ್ ಗಳಲ್ಲಿ ಹಿಂಬಾಲಿಸಿಕೊಂಡು ಬಂದ ಏಳೆಂಟು ಜನರ ತಂಡ ಗಂಜಾಂನ ಶ್ರೀನಿಮಿಷಾಂಬ ದೇವಾಲಯ ರಸ್ತೆಯಲ್ಲಿ ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಮಹಮದ್ ಸೋಯಬ್ ಅವರಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ನಿರ್ಮಾಣ ಹಂತದಲ್ಲಿದ್ದ ಚಂದ್ರು ಅವರ ತೋಟದ ಮನೆ ಒಳಗೆ ಹೋಗಿದ್ದಾನೆ.ಆದರೆ, ಹಂತಕರು ಆತನನ್ನು ಬಿಡದೆ ಹಿಂಬಾಲಿಸಿ ಹತ್ಯೆ ಮಾಡಿ ಬಳಿಕ ಮಾರಾಕಾಸ್ತ್ರಗಳನ್ನ ಸ್ಥಳದಲ್ಲೆ ಬಿಸಾಡಿ ಪರಾರಿಯಾಗಿದ್ದಾರೆ.
ಮಹಮದ್ ಸೋಯಬ್ ಕಳೆದ 15 ದಿನಗಳ ಹಿಂದೆ ಮದುವೆಯಾಗಿದ್ದನು. ಕಾರ್ ಡೀಲರ್ ಕೆಲಸ ಮಾಡುತ್ತಿದ್ದ ಈತನ ಜೊತೆ ಮೈಸೂರಿನ ರಾಜೀವ್ ನಗರ ನಿವಾಸಿ ಬಿಲಾಲ್ ಎಂಬ ವ್ಯಕ್ತಿ ಬಂದಿದ್ದನು. ಘಟನೆ ಬಳಿಕ ಆತ ಓಡಿ ಹೋಗಿರುವುದಾಗಿ ಪೊಲೀಸರಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಸೇರಿದಂತೆ ಸ್ಥಳೀಯ ಪೊಲೀಸರು ಹಾಗೂ ಸ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನಾ ಸ್ಥಳದಲ್ಲಿ ಬಿದಿದ್ದ ಮಾರಕಾಸ್ತ್ರ ಹಾಗೂ ಒಂದು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.