ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಪ್ಪನ ಅಗ್ರಹಾರ ಕಾರಾಗೃಹದಿಂದಲೇ ಮಹಿಳೆಯೊಬ್ಬರಿಗೆ ಅವರ ಪುತ್ರಿಯ ಮಾರ್ಫಿಂಗ್ ಆಶ್ಲೀಲ ಫೋಟೋ ಕಳುಹಿಸಿ ಹಣಕ್ಕೆ ರೌಡಿ ಬ್ಲ್ಯಾಕ್ಮೇಲ್ ಮಾಡಿರುವ ಘಟನೆ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಯಲಹಂಕ ಉಪನಗರದ ರೌಡಿ ಮನೋಜ್ ಅಲಿಯಾಸ್ ಕೆಂಚ ಹಾಗೂ ಆತನ ಸಹಚರ ಕಾರ್ತಿಕ್ ಈ ಕೃತ್ಯ ಎಸಗಿದ್ದು, ಸಂತ್ರಸ್ತೆ ದೂರು ಆಧರಿಸಿ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ತನಿಖೆಯನ್ನು ಸಿಸಿಬಿ ವಹಿಸಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಆರೋಪಿಯನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆಗೆ ಒಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಂಚ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಕೊಲೆ ಯತ್ನ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ. ಐದು ತಿಂಗಳ ಹಿಂದೆ ಯುವಕನ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಕೆಂಚನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಯಲಹಂಕ ಉಪನಗರ ಠಾಣೆ ಪೊಲೀಸರು ಅಟ್ಟಿದ್ದರು. ಅಂದಿನಿಂದ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಕೆಂಚ, ಸೆರೆಮನೆಯಲ್ಲೇ ಕುಳಿತೇ ಬ್ಲ್ಯಾಕ್ಮೇಲ್ ಮೂಲಕ ಹಣ ಸುಲಿಗೆ ಮಾಡಿದ್ದಾನೆ.ಕೆಲ ತಿಂಗಳ ಹಿಂದೆ ಯಲಹಂಕ ಉಪನಗರ ನಿವಾಸಿಯಾದ ಸಂತ್ರಸ್ತೆ ತಾಯಿಯ ವಾಟ್ಸಾಪ್ಗೆ ಅವರ ಪುತ್ರಿಯ ತಿರುಚಿದ ಆಶ್ಲೀಲ ಫೋಟೋವೊಂದನ್ನು ಕಳುಹಿಸಿದ್ದ. ಆ ಫೋಟೋ ನೋಡಿದ ಆತಂಕಗೊಂಡ ಅವರು, ತಕ್ಷಣವೇ ಕೆಂಚನಿಗೆ ಕರೆ ಮಾಡಿದ್ದರು. ಆಗ ನನ್ನ ಬಳಿ ಹಲವು ನಿಮ್ಮ ಮಗಳ ಬೆತ್ತಲೆ ಫೋಟೋಗಳಿವೆ. ನಾನು ಹೇಳಿದಂತೆ ನೀವು ಕೇಳದೆ ಹೋದರೆ ಅವುಗಳನ್ನು ನಿಮ್ಮ ಅಳಿಯನಿಗೂ ಕಳುಹಿಸುತ್ತೇನೆ ಎಂದು ಬೆದರಿಸಿದ್ದ. ಇದಕ್ಕೆ ಹೆದರಿದ ಸಂತ್ರಸ್ತೆ ತಾಯಿ, ಕೆಂಚನಿಗೆ ₹40 ಸಾವಿರ ನೀಡಿದ್ದರು.
ಇದಾದ ನಂತರ ಸುಮ್ಮನಿದ್ದ ಕೆಂಚ, ಮತ್ತೆ ಫೆ.9 ರಂದು ಸಂತ್ರಸ್ತೆಗೆ ಕಾಟ ಕೊಡಲಾರಂಭಿಸಿದ್ದ. ಅಂದು ತನ್ನ ಸಹಚರ ಕಾರ್ತಿಕ್ ಮೂಲಕ ಸಂತ್ರಸ್ತೆ ತಾಯಿಗೆ ಕರೆ ಮಾಡಿಸಿದ ಕೆಂಚ, ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಇದಾದ ನಂತರ ಫೆ.12ರಂದು ಮತ್ತೆ ಕರೆ ಮಾಡಿ ಹಣ ಕೊಡುವಂತೆ ಕೆಂಚ ಬೆದರಿಕೆ ಹಾಕಿದ್ದ. ಈ ರೌಡಿ ಉಪಟಳ ಸಹಿಸಲಾರದೆ ಯಲಹಂಕ ಉಪನಗರ ಠಾಣೆಗೆ ಸಂತ್ರಸ್ತೆ ತಾಯಿ ದೂರು ನೀಡಿದ್ದಾರೆ. ತಮ್ಮ ಮಗಳ ಭಾವಚಿತ್ರವನ್ನು ಅಪರಿಚಿತ ದೇಹಕ್ಕೆ ಜೋಡಿಸಿದ್ದಾನೆ ಎಂದು ದೂರಿದ್ದಾರೆ.-ಬಾಕ್ಸ್-ಜೈಲಿನಲ್ಲಿ ರೌಡಿಗೆ
ಮೊಬೈಲ್: ತನಿಖೆಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರೌಡಿ ಕೆಂಚನಿಗೆ ಮೊಬೈಲ್ ಪೂರೈಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಜೈಲಿನಿಂದಲೇ ಸಂತ್ರಸ್ತೆಗೆ ಕೆಂಚ ಕರೆ ಮಾಡಿರುವುದು ತನಿಖೆಯಲ್ಲಿ ಖಚಿತವಾಗಿದೆ. ಹೀಗಾಗಿ ಆತನಿಗೆ ಅಕ್ರಮವಾಗಿ ಮೊಬೈಲ್ ಬಳಕೆಗೆ ಅವಕಾಶ ನೀಡಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.