ಸಾರಾಂಶ
ಹಲಗೂರು : ಅತೀ ವೇಗ ಬಂದ ಕಾರು ರಸ್ತೆ ಬದಿ ನಿಂತಿದ್ದವರಿಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡ ಘಟನೆ ಸಮೀಪದ ಡಿ.ಹಲಸಹಳ್ಳಿ ಗೇಟ್ ಬಳಿ ನಡೆದಿದೆ.
ಡಿ.ಹಲಸಹಳ್ಳಿ ಗೇಟ್ ನಿವಾಸಿ ದೇಸಿಲಿಂಗ (45) ಮತ್ತು ಎಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಕಮಲಮ್ಮ (55) ಮೃತಪಟ್ಟವರು.
ದೇಸಿಲಿಂಗ ಜೀವನ ನಿರ್ವಹಣೆಗಾಗಿ ಡಿ.ಹಲಸಹಳ್ಳಿ ಸರ್ಕಲ್ನಲ್ಲಿ ಕಬ್ಬಿನ ಹಾಲು ಮಾರುವ ಕಾಯಕ ಮಾಡಿಕೊಂಡಿದ್ದನು. ಕಮಲಮ್ಮ ಧನಗೂರು ಗ್ರಾಮದ ತನ್ನ ಮಗಳ ಮನೆಗೆ ಹೋಗಿ ಸ್ವಗ್ರಾಮ ಎಚ್.ಡಿ.ಕೋಟೆಗೆ ಕಡೆಗೆ ತೆರಳಲು ಬಸ್ಗಾಗಿ ಕಾಯುತ್ತಾ ನಿಂತಿದ್ದಳು.
ಈ ವೇಳೆ ಮಳವಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರು ರಸ್ತೆಯ ಸಂಪೂರ್ಣ ಬಲಭಾಗಕ್ಕೆ ಚಲಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ಕಬ್ಬಿನ ಜ್ಯೂಸ್ ಅಂಗಡಿಗೆ ಗುದ್ದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಕಮಲಮ್ಮ ಸ್ಥಳದಲ್ಲೇ ಮೃತಪಟ್ಟರೆ, ದೇಸಿಲಿಂಗ ಮಳವಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟನು.
ಕೈ ಗಾಡಿ ಬಳಿ ಕಬ್ಬಿನ ಜ್ಯೂಸ್ ಕುಡಿಯುತ್ತಾ ನಿಂತಿದ್ದ ಕೆಂಬೂತಗೆರೆ ಗ್ರಾಮದ ಕುಮಾರ ಮತ್ತು ರಾಜಣ್ಣ ಅವರಿಗೂ ಗಾಯಗಳಾಗಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.