ತಾನು ಕೆಲಸ ಮಾಡುತ್ತಿದ್ದ ಮಾಲಿಕರ ಮನೆಯಲ್ಲಿ ಚಿನ್ನ ಕಳವು ಮಾಡಿದ ಕಾರು ಚಾಲಕನೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಕ್ಕೂರಿನ ನಿವಾಸಿ ಅಭಿಲಾಷ್ ಗೌಡ ಬಂಧಿತನಾಗಿದ್ದು, ಆರೋಪಿಯಿಂದ 14.5 ಲಕ್ಷ ರು. ಮೌಲ್ಯದ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ
ಬೆಂಗಳೂರು : ತಾನು ಕೆಲಸ ಮಾಡುತ್ತಿದ್ದ ಮಾಲಿಕರ ಮನೆಯಲ್ಲಿ ಚಿನ್ನ ಕಳವು ಮಾಡಿದ ಕಾರು ಚಾಲಕನೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಕ್ಕೂರಿನ ನಿವಾಸಿ ಅಭಿಲಾಷ್ ಗೌಡ ಬಂಧಿತ
ಜಕ್ಕೂರಿನ ನಿವಾಸಿ ಅಭಿಲಾಷ್ ಗೌಡ ಬಂಧಿತನಾಗಿದ್ದು, ಆರೋಪಿಯಿಂದ 14.5 ಲಕ್ಷ ರು. ಮೌಲ್ಯದ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆತನ ಸ್ನೇಹಿತ ಮದನ್ ಕುಮಾರ್ ಪತ್ತೆಗೆ ತನಿಖೆ ನಡೆದಿದೆ.
ಉದ್ಯಮಿ ಪ್ರತೀಕ್ ಮನೆಯಲ್ಲಿ ಬಂಗಾರ ಕಳ್ಳತನ ದೂರು
ಕೆಲ ದಿನಗಳ ಹಿಂದೆ ಉದ್ಯಮಿ ಪ್ರತೀಕ್ ಮನೆಯಲ್ಲಿ ಬಂಗಾರ ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಉದ್ಯಮಿ ಕಾರು ಚಾಲಕನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮ್ಮ ಕುಟುಂಬದ ಜತೆ ರಿಯಲ್ ಎಸ್ಟೇಟ್ ಉದ್ಯಮಿ ಪ್ರತೀಕ್ ನೆಲೆಸಿದ್ದು, ಕಳೆದ ಹತ್ತು ವರ್ಷಗಳಲ್ಲಿ ಅವರ ಬಳಿ ಅಭಿಲಾಷ್ ಕಾರು ಚಾಲಕನಾಗಿದ್ದ. ತನ್ನ ಮಾಲಿಕರ ಆರ್ಥಿಕ ವಹಿವಾಟು ಬಗ್ಗೆ ತಿಳಿದ ಆತ, ಹಣದಾಸೆಯಿಂದ ಅವರ ಮನೆಯಲ್ಲಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಆತನಿಗೆ ಸ್ನೇಹಿತ ಮದನ್ ಎಂಬಾತ ಸಹ ಕೈ ಜೋಡಿಸಿದ್ದಾನೆ. ಅಂತೆಯೇ ಕೆಲ ದಿನಗಳ ಹಿಂದೆ ಪ್ರತೀಕ್ ಮನೆಯಲ್ಲಿ ಚಿನ್ನದ ಗಟ್ಟಿ ಕಳವು ಮಾಡಿದ್ದರು.
ಇತ್ತ ಮನೆಯಲ್ಲಿ ಚಿನ್ನ ಕಾಣದೆ ಹೋದಾಗ ಆತಂಕಗೊಂಡ ಅವರು, ಕೂಡಲೇ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಕೃತ್ಯದಲ್ಲಿ ತಮ್ಮ ಕಾರು ಚಾಲಕ ಅಭಿಲಾಷ್ ಹಾಗೂ ಆತನ ಸ್ನೇಹಿತನ ಕೈವಾಡದ ಬಗ್ಗೆ ಪ್ರತೀಕ್ ಅನುಮಾನ ವ್ಯಕ್ತಪಡಿಸಿದ್ದರು. ಆಗ ಶಂಕೆ ಮೇರೆಗೆ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

