ಬಸ್ ನಿಲ್ದಾಣಕ್ಕೆ ಉದ್ಯಮಿ ಕುಟುಂಬದವನ್ನು ಡ್ರಾಪ್ ಮಾಡಿದ ಬಳಿಕ ಅವರ ಮನೆಗೆ ಕನ್ನ ಹಾಕಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಕಾರು ಚಾಲಕನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಸ್ ನಿಲ್ದಾಣಕ್ಕೆ ಉದ್ಯಮಿ ಕುಟುಂಬದವನ್ನು ಡ್ರಾಪ್ ಮಾಡಿದ ಬಳಿಕ ಅವರ ಮನೆಗೆ ಕನ್ನ ಹಾಕಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಕಾರು ಚಾಲಕನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮನೋರಾಯನಪಾಳ್ಯದ ಅಬ್ದುಲ್ ರೆಹಮಾನ್ ಬಂಧಿತನಾಗಿದ್ದು, ಆರೋಪಿಯಿಂದ 17.70 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಕನಕನಗರದ ಸೈಯದ್ ಶೇಕ್ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಮನೆ ಕೆಲಸದಾಳಿನ ಮಗಳ ಸ್ನೇಹಿತ ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಅಬ್ದುಲ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ವಿರುದ್ಧ ಕೆ.ಜಿ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಬ್ ಚಾಲನೆ ಜತೆ ಮನೆ ಕಳ್ಳತನ ಕೃತ್ಯಗಳಲ್ಲಿ ಆತ ತೊಡಗಿದ್ದ. ಕೆಲ ದಿನಗಳ ಹಿಂದೆ ರಂಜಾನ್ ಹಬ್ಬದ ನಿಮಿತ್ತ ಮುಂಬೈಗೆ ಶಾಪಿಂಗ್ ಸಲುವಾಗಿ ಸೈಯದ್ ಕುಟುಂಬ ತೆರಳಿತ್ತು. ಆಗ ಆ ಕುಟುಂಬದವರನ್ನು ತನ್ನ ಕ್ಯಾಬ್ ನಲ್ಲಿ ಯಶವಂತಪುರದ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿ ಬಂದ ಬಳಿಕ ಅವರ ಮನೆಗೆ ಆರೋಪಿ ಕನ್ನ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಯದ್ ಮನೆಯಲ್ಲಿ ಆರೋಪಿ ಸ್ನೇಹಿತೆಯ ತಾಯಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಆತನಿಗೆ ದೂರುದಾರರ ಆರ್ಥಿಕ ಪರಿಸ್ಥಿತಿ ತಿಳಿದು ಈ ಕೃತ್ಯ ಎಸಗಿದ್ದಾನೆ. ಮೊದಲು ಮನೆಕೆಲಸಗಾರರ ಮೇಲೆ ದೂರುದಾರರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ವಿಚಾರಣೆಗೊಳಪಡಿಸಿದಾಗ ಕ್ಯಾಬ್ ಚಾಲಕನ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕದ್ದ ಚಿನ್ನ ಖರೀದಿಸಿದ್ದ ವ್ಯಾಪಾರಿಗಳು ಜೈಲುಪಾಲು!
ಇನ್ನು ಈ ಆರೋಪಿಯಿಂದ ಕಳವು ಚಿನ್ನ ಖರೀದಿಸಿದ್ದ ಇಬ್ಬರು ಚಿನ್ನದ ವ್ಯಾಪಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ತನಗೆ ಮನೆಯಲ್ಲಿ ಕಷ್ಟವಿದೆ ಎಂದು ಹೇಳಿ ವ್ಯಾಪಾರಿಗಳಿಗೆ ಕದ್ದ ಚಿನ್ನವನ್ನು ಆರೋಪಿ ಮಾರಾಟ ಮಾಡಿದ್ದ. ಹೀಗಾಗಿ ಕಳವು ಚಿನ್ನ ಸ್ವೀಕರಿಸಿದ ಆರೋಪದ ಮೇರೆಗೆ ವ್ಯಾಪಾರಿಗಳನ್ನು ಸಹ ಬಂಧಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.