- ಸಂತೆಬೆನ್ನೂರು ಠಾಣೆ ಪೊಲೀಸರು ಕಾರ್ಯಾಚರಣೆ: ಡಿವೈಎಸ್‌ಪಿ ರುದ್ರಪ್ಪ ಮಾಹಿತಿ । ಎಸ್‌ಪಿ ಶ್ಲಾಘನೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

2025ರ ಸೆಪ್ಟೆಂಬರಲ್ಲಿ ತಾಲೂಕಿನ ಕಾಕನೂರು ಗ್ರಾಮದ ಹೊರವಲಯದಲ್ಲಿದ್ದ ಒಂಟಿ ಮನೆಗೆ ನುಗ್ಗಿ, ಚಿನ್ನಾಭರಣ ದೋಚಿದದ್ದ 4 ಜನ ಡಕಾಯಿತರನ್ನು ಸಂತೆಬೆನ್ನೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇಲ್ಲಿನ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ತಿಳಿಸಿದ್ದಾರೆ.

2025ರ ಸೆ.6ರಂದು ರಾತ್ರಿ ವಯೋವೃದ್ಧ ದಂಪತಿ ಮಾದಪ್ಪ, ಪತ್ನಿ ಸಾವಿತ್ರಮ್ಮ ಅವರ ಮೇಲೆ ದರೋಡೆಕೋರರಾದ ತಮಿಳುನಾಡಿನ ಸತೀಶ್ ಕುಮಾರ್, ಕೇಶವನ್, ಅರುಣ್, ಅರಸು ಹಲ್ಲೆ ಮಾಡಿ, ಕೈ-ಕಾಲು ಕಟ್ಟಿಹಾಕಿ ಮಾಂಗಲ್ಯ ಸರ, ಕೈಬಳೆ, ಕಿವಿ ಓಲೆ ಸೇರಿದಂತೆ ಬೆಳ್ಳಿ-ಬಂಗಾರದ ವಸ್ತುಗಳು, ನಗದು ಹಣವನ್ನು ದೋಚಿದ್ದರು.


2026ರ ಜ.23ರಂದು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಯಾವುದೋ ಕಾರಣಗಳಿಗಾಗಿ ವಿಚಾರಣೆ ನಡೆಸುವಾಗ ಕಾಕನೂರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಸಂತೆಬೆನ್ನೂರು ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಆರ್.ಚೌಬೆ ಮತ್ತು ಸಬ್ ಇನ್‌ಸ್ಪೆಕ್ಟರ್ ಜಗದೀಶ್ ಅವರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ಹಿರಿಯ ಪೊಲೀಸ್ ಆಧಿಕಾರಿಗಳ ಮಾರ್ಗದರ್ಶನದಲ್ಲಿ ಸದರಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಈ ಆರೋಪಿಗಳು ಕಾಕನೂರು ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಡಕಾಯಿತಿ ಮಾಡಿದ್ದ ಆಭರಣಗಳನ್ನು ತಮಿಳುನಾಡಿನ ವಿವಿಧ ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ ಮೇರೆಗೆ ಬ್ಯಾಂಕುಗಳಿಂದ ₹14 ಲಕ್ಷ ಬೆಲೆಬಾಳುವ 96.1 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಡಿವೈಎಸ್‌ಪಿ ತಿಳಿಸಿದ್ದಾರೆ.

ಕಡಾಯಿತಿ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಾಗೂ ಸ್ವತ್ತು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಈ ಹಿಂದೆ ತನಿಖೆ ನಡೆಸಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೂ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ. ಶೇಖರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಪ್ರಶಂಶಿಸಿದ್ದಾರೆ ಎಂದರು.

- - -

(ಬಾಕ್ಸ್) * ನಲ್ಲೂರಲ್ಲಿ ಒಡವೆ, ಹಣ ಕದ್ದಿದ್ದ ಮೂವರ ಬಂಧನ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿನ ಸೈಯ್ಯದ್ ನಫೀಜ್ ಆಹಮ್ಮದ್ ಮನೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದ ಸಂದರ್ಭ ಫೆ.14ರಂದು ಕಳ್ಳರು ಮನೆಯ ಬಾಗಿಲ ಬೀಗ ಬಿಚ್ಚಿ, ಗಾಡ್ರೇಜ್ ಬೀರುವಿನಲ್ಲಿದ್ದ ಬಂಗಾರದ ಒಡವೆಗಳು ಮತ್ತು ನಗದು ಹಣ ಕಳವು ಮಾಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಯದ್ ಮುದಾಸೀರ್, ಸೈಯದ್ ಮುಜಾಮಿಲ್ , ಮಹಮ್ಮದ್ ಸಾಹಿಲ್ ಬಂಧಿತರು. ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ.ಶೇಖರ್ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಆಧೀಕ್ಷಕ ಪರಮೇಶ್ವರ ಹೆಗಡೆ, ಉಪವಿಭಾಗದ ಡಿವೈಎಸ್‌ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಲು ತಂಡ ರಚಿಸಲಾಗಿತ್ತು. ಅದರಂತೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎನ್.ರವೀಶ್ ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಗಳ ಪತ್ತೆ ಹಚ್ಚಿ, ₹10 ಲಕ್ಷ ಮೌಲ್ಯದ 72 ಗ್ರಾಂ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ.

- - -

-23ಕೆಸಿಎನ್‌ಜಿ1.ಜೆಪಿಜಿ: ಆಭರಣ ಕಳ್ಳರಿಂದ ವಶಕ್ಕೆ ಪಡೆದ ಬಂಗಾರದ ಆಭರಣಗಳೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ.