ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಾದಚಾರಿ ಯುವಕನಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಮೈಸೂರು- ಬೆಂಗಳೂರು ಹೆದ್ದಾರಿಯ ವಿದ್ಯುತ್ ಇಲಾಖೆ ಕಚೇರಿ ಬಳಿ ನಡೆದಿದೆ.ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂ ಗ್ರಾಮದ ಶಿವಣ್ಣರ ಪುತ್ರ ಪೃಥ್ವಿ (19) ಮೃತ ಯುವಕ ಎಂದು ತಿಳಿದು ಬಂದಿದೆ. ಈತ ತನ್ನ ತಂದೆ ಶಿವಣ್ಣರನ್ನು ನೋಡಲು ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಬಳಿ ಹೋಗುತ್ತಿರುವ ವೇಳೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ನಂತರ ಯುವಕ ಪೃಥ್ವಿ ಸಹಿತ ಹಳ್ಳಕ್ಕೆ ಕಾರು ಉರುಳಿ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಪೆಟ್ಟು ಬಿದ್ದು ಯುವಕ ಸ್ಥಳದಲ್ಲೇ ಸಾವೀಗೀಡಾಗಿದ್ದಾನೆ.
ಕಾರಿನ ಚಾಲಕ ತನ್ನ ಮಗುವನ್ನು ಕೂರಿಸಿಕೊಂಡು ಮಗುವಿಗೆ ಸ್ಟೇರಿಂಗ್ ಕೊಟ್ಟಿದ್ದರಿಂದ ಈ ಅವಘಡಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಕಾರು ಚಾಲಕನಿಗೂ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳಕ್ಕೆ ಟೌನ್ ಪೊಲೀಸರು ಭೇಟಿ ನೀಡಿ, ಕಾರನ್ನು ಮೇಲೆತ್ತಿ ಹಾಗೂ ಯುವಕನ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.