ಶ್ರೀರಂಗಪಟ್ಟಣ ತಾಲೂಕು ಅರಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೀಲ್ಸ್ ರಾಣಿಯರಿಂದ ನೃತ್ಯ ಮಾಡಲು ಅವಕಾಶ ಮಾಡಿಕೊಟ್ಟು ಕರ್ತವ್ಯಲೋಪವೆಸಗಿರುವ ಆಸ್ಪತ್ರೆ ಆಡಳಿತಾಧಿಕಾರಿ, ಸಿಎಚ್ಸಿ ವೈದ್ಯರ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪರಿಂದ ಸ್ವಯಂಪ್ರೇರಿತ ದೂರು ದಾಖಲು.
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕು ಅರಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೀಲ್ಸ್ ರಾಣಿಯರಿಂದ ನೃತ್ಯ ಮಾಡಲು ಅವಕಾಶ ಮಾಡಿಕೊಟ್ಟು ಕರ್ತವ್ಯಲೋಪವೆಸಗಿರುವ ಆಸ್ಪತ್ರೆ ಆಡಳಿತಾಧಿಕಾರಿ, ಸಿಎಚ್ಸಿ ವೈದ್ಯರ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ಶಾಸಕ ರಮೇಶ್ ಬಂಡಿಸಿದ್ದೇಗೌಡರ ತಾಯಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡರ ೮೦ನೇ ಹುಟ್ಟುಹಬ್ಬವನ್ನು ಅರಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಚರಣೆಗೆ ಅವಕಾಶ ನೀಡಿರುವುದು, ಮಹಿಳಾ ರಂಗಭೂಮಿ ಕಲಾವಿದರಿಗೆ ಮಕ್ಕಳ ವಿಭಾಗದಲ್ಲಿದ್ದ ವೈದ್ಯಾಧಿಕಾರಿ ಕೊಠಡಿಯನ್ನು ನೃತ್ಯ ಮಾಡಲು, ಮೇಕಪ್ ಮಾಡಿಕೊಳ್ಳಲು ಹಾಗೂ ರೀಲ್ಸ್ ಚಿತ್ರೀಕರಿಸಲು ಅನುಮತಿ ನೀಡಿ ಕರ್ತವ್ಯಲೋಪವೆಸಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಮಹಿಳೆಯರಿಗೆ ಚಿಕಿತ್ಸೆ ನೀಡಲು ಮೀಸಲಿರಿಸಿದ್ದ ಕೊಠಡಿಯನ್ನು ಖಾಲಿ ಮಾಡಿಸಿ ಖಾಸಗಿಯವರಿಗೆ ಉಪಯೋಗಿಸಲು ಅವಕಾಶ ಮಾಡಿಕೊಟ್ಟು ರೋಗಿಗಳಿಗೆ ಅನಾನುಕೂಲ ಕಲ್ಪಿಸಿರುವುದು. ವೈದ್ಯಾಧಿಕಾರಿ ಕೊಠಡಿಯಲ್ಲಿ ಮಹಿಳಾ ನರ್ತಕಿಯರಿಗೆ ರೀಲ್ಸ್ ಮಾಡಲು ಅವಕಾಶ ನೀಡಿರುವುದು ಮತ್ತು ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೊಳಗಾಗಿ ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ತಾತ್ಕಾಲಿಕವಾಗಿ ಉಪಯೋಗಿಸಲು ಅವಕಾಶ ನೀಡಿರುವುದು ಕಾನೂನುಬಾಹೀರವಾಗಿದೆ ಎಂದು ಹೇಳಿದ್ದಾರೆ.ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾದ ತಿಬ್ಬೇಗೌಡರು ಆಸ್ಪತ್ರೆಯ ಸ್ವಚ್ಛತೆ, ವೈದ್ಯರು ಸಮಯಕ್ಕೆ ಸರಿಯಾಗಿ ಬರುವಂತೆ ಮತ್ತು ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕಿರುವುದು ಅವರ ಕರ್ತವ್ಯ. ಆದರೆ, ತಮ್ಮ ಮೂಲಭೂತ ಕರ್ತವ್ಯಗಳನ್ನು ಕಡೆಗಣಿಸಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಯಾರ ಅನುಮತಿಯನ್ನೂ ಪಡೆಯದೆ ಮೇಕಪ್, ನೃತ್ಯ ಮತ್ತು ರೀಲ್ಸ್ ಚಿತ್ರೀಕರಣಕ್ಕೆ ಅವಕಾಶ ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ಖಾಸಗಿ ವ್ಯಕ್ತಿಗಳು ಮಹಿಳಾ ವಾರ್ಡ್ ಮತ್ತು ಕೊಠಡಿ ಬಳಸುವುದರಿಂದ ಅಲ್ಲಿನ ರೋಗಿಗಳಿಗೆ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಖಾಸಗಿ ಕಾರ್ಯಕ್ರಮಕ್ಕೆ ಆಹಾರ ತಯಾರಿಸಲು ಸರ್ಕಾರಿ ಆಸ್ಪತ್ರೆ ಆವರಣದ ಜಾಗ ಬಿಟ್ಟುಕೊಟ್ಟು ತಿಬ್ಬೇಗೌಡರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿದೆ. ಆಡಳಿತಾಧಿಕಾರಿಗಳ ಈ ನಡೆ ವೈದ್ಯಾಧಿಕಾರಿಗಳ ಕರ್ತವ್ಯನಿರ್ಲಕ್ಷ್ಯ, ಬೇಜವಾಬ್ದಾರಿತನ, ಉದಾಸೀನತೆ, ದುರಾಡಳಿತ, ಕರ್ತವ್ಯಲೋಪವನ್ನು ಎಸಗಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡು ಭ್ರಷ್ಟಾಚಾರಕ್ಕೆ ಸಹಕರಿಸುತ್ತಿರುವುದು ಕಂಡುಬಂದಿದೆ. ಈ ಸಂಬಂಧ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಡಳಿತ ವೈದ್ಯಾಧಿಕಾರಿಗೆ ಸೂಚಿಸಿದ್ದಾರೆ.