ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಗ್ರಾಮದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವ ಪಾಂಡವಪುರ ವಿಭಾಗಾಧಿಕಾರಿ ಕ್ರಮ ಆಕ್ಷೇಪಿಸಿ ಅನುವಿನಕಟ್ಟೆ ಗ್ರಾಮದ ನಿವಾಸಿಗಳಾದ ಸಿ.ಶ್ರೀನಿವಾಸ್‌ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಮ್ಮೆ ಉದ್ಯಾನ ಜಾಗ ಮೀಸಲಿಟ್ಟರೆ, ಅದನ್ನು ಸಂರಕ್ಷಣೆ ಮಾಡುವುದು ಜಿಲ್ಲಾಧಿಕಾರಿ ಮತ್ತು ಎಲ್ಲ ಸ್ಥಳೀಯ ಸಂಸ್ಥೆಗಳ ಕರ್ತವ್ಯ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಗ್ರಾಮದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವ ಪಾಂಡವಪುರ ವಿಭಾಗಾಧಿಕಾರಿ ಕ್ರಮ ಆಕ್ಷೇಪಿಸಿ ಅನುವಿನಕಟ್ಟೆ ಗ್ರಾಮದ ನಿವಾಸಿಗಳಾದ ಸಿ.ಶ್ರೀನಿವಾಸ್‌ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರು ಹೇಳುತ್ತಿರುವ ಜಾಗ ಕೆ.ಆರ್‌.ಪೇಟೆ ಗ್ರಾಮದ ಸರ್ವೇ ನಂಬರ್‌ 244ರಲ್ಲಿನ 6 ಎಕರೆ 32 ಗುಂಟೆ ಜಾಗ ಉದ್ಯಾನಕ್ಕೆ ಮೀಸಲಿಡಲಾಗಿದೆ ಎಂಬುದು ಕಂದಾಯ ದಾಖಲೆಗಳಿಂದ ದೃಢಪಡುತ್ತದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್‌ 67 ಅಡಿಯಲ್ಲಿ ಉದ್ಯಾನ ಜಾಗವನ್ನು ಸಂರಕ್ಷಣೆ ಮಾಡುವುದು ಜಿಲ್ಲಾಧಿಕಾರಿ ಕರ್ತವ್ಯ. ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ಮುಕ್ತ ಪ್ರದೇಶಗಳ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ-1985 ಅಡಿ ಉದ್ಯಾನ ಮತ್ತು ಮುಕ್ತ ಪ್ರದೇಶಗಳ ಸಂರಕ್ಷಣೆ ಎಲ್ಲ ಸ್ಥಳೀಯ ಸಂಸ್ಥೆಗಳ ಕರ್ತವ್ಯ.

ಅದರಂತೆ ಮಂಡ್ಯ ಜಿಲ್ಲಾಧಿಕಾರಿ ಮತ್ತು ಪಾಂಡವಪುರ ಉಪ ವಿಭಾಗಾಧಿಕಾರಿ, ಸರ್ವೇ 244ರಲ್ಲಿನ 6 ಎಕರೆ 32 ಗುಂಟೆ ಜಾಗವನ್ನು ಉದ್ಯಾನ ಅಭಿವೃದ್ಧಿಗೆ ಮೀಸಲಿಡಬೇಕು ಎಂಬ ಅರ್ಜಿದಾರರ ಮನವಿಯನ್ನು ಮೂರು ತಿಂಗಳಲ್ಲಿ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ಪೀಠ ನಿರ್ದೇಶಿಸಿದೆ.

ಪ್ರಕರಣದ ವಿವರ:

ಕೆ.ಆರ್‌.ಪೇಟೆ ಗ್ರಾಮದ ಸರ್ವೇ ನಂಬರ್‌ 244ರಲ್ಲಿ ಕೆರೆ-ಕುಂಟೆ ಪ್ರದೇಶವಿದೆ. ಈ ಪೈಕಿ 6 ಎಕರೆ 32 ಗುಂಟೆ ಜಾಗವನ್ನು ನಿಯಮಗಳನ್ನು ಉಲ್ಲಂಘಿಸಿ ಉದ್ಯಾನ ಅಭಿವೃದ್ಧಿಪಡಿಸಲು 1974ರ ನ.27ರಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಅನುಮತಿದ್ದರು. ನಂತರ ಕೆ.ಆರ್‌.ಪೇಟೆ ಪುರಸಭೆಯು ಉದ್ಯಾನ ಅಭಿವೃದ್ಧಿಗೆ ಮೀಸಲಿದ್ದ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿಸಿದ್ದಾರೆ.

ಇದರಿಂದ ಈ ಜಾಗವನ್ನು ಉದ್ಯಾನ ಅಭಿವೃದ್ದಿಗೆ ಮೀಸಲು ಇಡಬೇಕು ಎಂದು ಕೋರಿ 2024ರ ನ.13ರಂದು ತಾವು ಸಲ್ಲಿಸಿದ ಮನವಿಪತ್ರವನ್ನು ಮಂಡ್ಯ ಜಿಲ್ಲಾಧಿಕಾರಿ ಮತ್ತು ಪಾಂಡವಪುರ ಉಪ ವಿಭಾಗಾಧಿಕಾರಿ ಪರಿಗಣಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.ಪುರಸಭೆ ಪರ ವಕೀಲರು, ಅರ್ಜಿದಾರರು ಪ್ರಶ್ನಿಸಿರುವ ಭೂಮಿಯ ಭಾಗವೊಂದನ್ನು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ 1984ರಲ್ಲೇ ಮಂಜೂರು ಮಾಡಿದ್ದು, ಅಂದಿನಿಂದಲೂ ಬಸ್‌ ನಿಲ್ದಾಣವಿದ್ದು, ಈ ಹಂತದಲ್ಲಿ ಅರ್ಜಿದಾರರ ಮನವಿ ಪರಿಗಣಿಸಿ ಜಾಗವನ್ನು ಉದ್ಯಾನಕ್ಕಾಗಿ ಮರುಸ್ಥಾಪಿಸಲಾಗದು ಎಂದಿದ್ದರು.

ವಿವಾದಿತ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಪರ ವಕೀಲರು, ವಿವಾದಿತ ಜಾಗವನ್ನು ಜಿಲ್ಲಾಧಿಕಾರಿ ಅನುಮತಿಯೊಂದಿಗೆ ಹಿಂದಿನ ಮಂಡಲ ಪಂಚಾಯ್ತಿಯಿಂದ ಕಾನೂನು ಬದ್ಧವಾಗಿಯೇ ಜಿಲ್ಲಾಧಿಕಾರಿಯಿಂದ ಖರೀದಿಸಲಾಗಿದೆ. ಸದ್ಯ ಜಾಗ ತಮ್ಮ ಸ್ವಾಧೀನದಲ್ಲಿದೆ ಎಂದಿದ್ದರು.

ಕಬ್ಬಿಣ ಕೊರೆಯುವ ಯಂತ್ರಕ್ಕೆ ಬಾಲಕ ಬಲಿ

ನಾಗಮಂಗಲ:

ಕಬ್ಬಿಣ ಮತ್ತು ಗೋಡೆಯುವ ಕೊರೆಯುವ ಮಿಷನ್‌ನನ್ನು ಹಿಡಿದಿದ್ದ ಬಾಲಕ ಆಕಸ್ಮಿಕವಾಗಿ ಆನ್‌ ಮಾಡಿದ್ದರಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.

ದರ್ಶನ್‌ (11) ಮೃತ ಬಾಲಕ. ಈತನ ತಂದೆ ಪುಟ್ಟಸ್ವಾಮಿ ಮನೆಯ ಗಾರೆ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯ ಬಳಿ ಕಬ್ಬಿಣ ಹಾಗೂ ಗೋಡೆ ಕೊರೆಯುವ ಮಿಷನ್‌ನನ್ನು ಇಟ್ಟಿದ್ದರು. ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಆಟವಾಡಿಕೊಂಡಿದ್ದ ದರ್ಶನ್‌ ಆ ಮಿಷಿನ್‌ ತೆಗೆದುಕೊಂಡು ಆಕಸ್ಮಿಕವಾಗಿ ಆನ್‌ ಮಾಡಿದ್ದಾನೆ. ಕೂಡಲೇ ಮಿಷನ್‌ ಚಕ್ರ ಆತನ ಎದೆ, ಭುಜ, ಕೈಗಳನ್ನು ಸೀಳಿದೆ. ಕೂಡಲೇ ಆತನನ್ನು ಪೋಷಕರು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದನು. ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿರತೆ ದಾಳಿಗೆ ಮೇಕೆ ಬಲಿ

ಮಳವಳ್ಳಿ:

ತಾಲೂಕಿನ ಗಾಜನೂರು ಗ್ರಾಮದಲ್ಲಿ ಗುರುವಾರ ಚಿರತೆ ದಾಳಿ ಮಾಡಿ ಮೇಕೆಯನ್ನು ಕೊಂದು ಹಾಕಿದೆ.ಗ್ರಾಮದ ಮಹದೇವು ಎಂಬುವರಿಗೆ ಸೇರಿದ ಮೇಕೆಗಳನ್ನು ಗ್ರಾಮದ ಹೊರವಲಯದಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿ ಕೊಂದು ಪರಾರಿಯಾಗಿದೆ.

ಗ್ರಾಮಸ್ಥರ ಆಕ್ರೋಶ: ಕಳೆದ ಹಲವು ತಿಂಗಳಿಂದ ನಿರಂತರವಾಗಿ ಗಾಜನೂರು, ನಿಡಘಟ್ಟ, ಸುಣ್ಣದದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ದಾಳಿ ಮಾಡಿ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಸಾಕಷ್ಟು ಬಾರಿ ಅರಣ್ಯ ಇಲಾಖೆಯ ಗಮನಕ್ಕೂ ತಂದರೂ ಯಾವುದೇ ಕ್ರಮ ವಹಿಸಿಲ್ಲ, ಅಲ್ಲದೇ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೂಡಲೇ ಚಿರತೆಗಳ ಸೆರೆಗೆ ಮುಂದಾಗಬೇಕು ಎಂದು ರೈತ ಮಹದೇವು ಆಗ್ರಹಿಸಿದ್ದಾರೆ.