ಸಾರಾಂಶ
ಬೆಂಗಳೂರು : ತನ್ನ ಬಾಮೈದನಿಂದ ಕಳವು ಮಾಡಿದ ಚಿನ್ನಾಭರಣ ಸ್ವೀಕರಿಸಿದ್ದರಿಂದ ಅವಮಾನಿತನಾಗಿ ವ್ಯಾಪಾರಿಯೊಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಕ್ಕೂರು ಲೇಔಟ್ ನಿವಾಸಿ ಮೋಹನ್ ರಾಜ್ (42) ತಮ್ಮ ಮನೆ ಸಮೀಪ ಮಂಗಳವಾರ ಮುಂಜಾನೆ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ರಕ್ತಸಿಕ್ತವಾಗಿ ಬಿದ್ದಿದ್ದ ಮೋಹನ್ ಮೃತದೇಹ ಕಂಡು ಕುಟುಂಬದವರು ಆಘಾತಗೊಂಡಿದ್ದಾರೆ. ತಕ್ಷಣವೇ ಘಟನೆ ಕುರಿತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಕ್ಕೂರು ಲೇಔಟ್ನಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ನೆಲೆಸಿದ್ದ ಮೋಹನ್ ಅವರು, ಮನೆ ಸಮೀಪ ಗೂಡಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಮೃತರ ಭಾಮೈದನನ್ನು ವಿವಿಪುರ ಠಾಣೆ ಪೊಲೀಸರು ಬಂಧಿಸಿದ್ದರು. ಆಗ ಮೋಹನ್ ಮನೆಯಲ್ಲಿ ಅವರ ಭಾಮೈದ ಕಳವು ಮಾಡಿ ತಂದಿಟ್ಟಿದ್ದ 800 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ಸಲುವಾಗಿ ವಿವಿಪುರ ಠಾಣೆಗೆ ಮೋಹನ್ ತೆರಳಿದ್ದಾಗ ಅವರಿಗೆ ದೂರುದಾರರು ನಿಂದಿಸಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದ ಮೋಹನ್, ಮಂಗಳವಾರ ಕುಟುಂಬದವರು ನಿದ್ರೆಯಲ್ಲಿದ್ದಾಗ ಮನೆಯಿಂದ ಹೊರಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.