ಕಾವೇರಿ ನದಿ ದಂಡೆಯಲ್ಲಿ ಅಸ್ಥಿ ವಿಸರ್ಜನೆ : ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ನೋಟಿಸ್

| Published : Jul 30 2024, 12:38 AM IST / Updated: Jul 30 2024, 05:32 AM IST

ಸಾರಾಂಶ

ಕಾವೇದಿ ನದಿ ದಂಡೆಯಲ್ಲಿ ಅಸ್ಥಿ ವಿಸರ್ಜನೆ ಸೇರಿದಂತೆ ಇತರೆ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಮತ್ತು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆಗೆ ಅವಕಾಶ ಕಲ್ಪಿಸಲು ಮಾರ್ಗಸೂಚಿ ರೂಪಿಸುವಂತೆ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

 ಬೆಂಗಳೂರು :  ಕಾವೇದಿ ನದಿ ದಂಡೆಯಲ್ಲಿ ಅಸ್ಥಿ ವಿಸರ್ಜನೆ ಸೇರಿದಂತೆ ಇತರೆ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಮತ್ತು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆಗೆ ಅವಕಾಶ ಕಲ್ಪಿಸಲು ಮಾರ್ಗಸೂಚಿ ರೂಪಿಸುವಂತೆ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ವಕೀಲ ಕುಶಾಲ್ ಕುಮಾರ್ ಕೌಶಿಕ್ ಸೇರಿ ಆರು ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಮಂಡ್ಯ ಜಿಲ್ಲಾಧಿಕಾರಿ, ಮಂಡ್ಯ ಉಪ ವಿಭಾಗಾಧಿಕಾರಿ, ಶ್ರೀರಂಗಪಟ್ಟಣ ತಹಸೀಲ್ದಾರ್‌ ಮತ್ತು ಶ್ರೀರಂಗಪಟ್ಟಣ ನಗರಸಭೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರು ಖುದ್ದು ವಾದ ಮಂಡಿಸಿ, ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜಿಸಲಾಗುತ್ತಿದೆ. ಈ ಹಿಂದೆ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ನಡೆಯುತ್ತಿತ್ತು. ಈಗ ನದಿಯ ತೀರದ ಎಲ್ಲ ಕಡೆಗಳಲ್ಲೂ ಅಸ್ಥಿ ವಿಸರ್ಜನೆ ನಡೆಸಲಾಗುತ್ತಿದೆ. ಇದರಿಂದ ಮಾಲಿನ್ಯ ವಿಪರೀತ ಹೆಚ್ಚಳವಾಗಿದೆ. ಇದೇ ನೀರನ್ನು ಕುಡಿಯಲು ಬಳಕೆ ಮಾಡಲಾಗುತ್ತದೆ ಹಾಗೂ ಭಕ್ತಾದಿಗಳಿಗೆ ಅಭಿಷೇಕವಾಗಿ ನೀಡಲಾಗುತ್ತದೆ ಎಂದು ವಿವರಿಸಿದರು.

‘ನದಿಯನ್ನು ಕಾನೂನಾತ್ಮಕ ವ್ಯಕ್ತಿ ಎಂದು ಘೋಷಿಸಿ’

ಅಸ್ಥಿ ವಿಸರ್ಜನೆ ಕ್ರಿಯೆಗೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೊಂದು ನಿಗದಿತ ಜಾಗ ಹಾಗೂ ನಿರ್ದಿಷ್ಠ ಮಾರ್ಗಸೂಚಿಗಳು ಇರಬೇಕು. ಅವುಗಳನ್ನು ಕಡ್ಡಾಯಯವಾಗಿ ಪಾಲಿಸುವಂತಾಗಬೇಕು ಎಂಬುದಷ್ಟೇ ನಮ್ಮ ಕಾಳಜಿ. ಅದರಂತೆ ನದಿ ತೀರ, ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಮತ್ತು ನಿಮಿಷಾಂಭ ದೇವಸ್ಥಾನದ ಸಮೀಪ ಅಸ್ಥಿ ವಿಸರ್ಜನೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ವಿಧಿಸಬೇಕು. ಅಸ್ಥಿ ವಿಸರ್ಜನೆಗೆ ಮಾರ್ಗಸೂಚಿ ರೂಪಿಸಬೇಕು. ಉತ್ತರಾಖಂಡ ಹೈಕೋರ್ಟ್ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳನ್ನು ‘ಜ್ಯುರಿಸ್ಟಿಕ್ ಪರ್ಸನ್’ ಎಂದು ಘೋಷಿಸಲಾಗಿದೆ. ಅದೇ ರೀತಿ ಕಾವೇರಿ ನದಿಯನ್ನೂ ‘ಜ್ಯುರಿಸ್ಟಿಕ್‌ ಪರ್ಸನ್’ ಎಂದು (ಕಾನೂನಾತ್ಮಕ ವ್ಯಕ್ತಿ-ನಿಸರ್ಗದ ಭಾಗಗಳನ್ನು ವ್ಯಕ್ತಿಗಳ ರೀತಿಯಲ್ಲಿ ಕಾನೂನು ಅಡಿಯಲ್ಲಿ ಪರಿಗಣಿಸುವುದು) ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದರು.