ಸಾರಾಂಶ
ಮೂವರು ಬೈಕ್ನಲ್ಲಿ ಬಂದವರು ಸೈಕಲ್ ಸವಾರರನ್ನು ಅಡ್ಡಗಟ್ಟಿ ₹100, ಮೊಬೈಲ್ ದರೋಡೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಳಾಸ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಸೈಕಲ್ ಸವಾರನ ಅಡ್ಡಗಟ್ಟಿ ₹100 ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತೂಬನಹಳ್ಳಿಯ ವಿಬ್ಗಯಾರ್ ಶಾಲೆಯ ಹಿಂಭಾಗದ ರಸ್ತೆಯಲ್ಲಿ ಭಾನುವಾರ ರಾತ್ರಿ 10ರ ಸುಮಾರಿಗೆ ಈ ಘಟನೆ ನಡೆದಿದೆ. ಬುದ್ಧ ಎಂಬುವವರು ದರೋಡೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುದ್ಧ ಸೈಕಲ್ನಲ್ಲಿ ತೆರಳುವಾಗ ಮೂರು ದ್ವಿಚಕ್ರ ವಾಹನಗಳಲ್ಲಿ ಆರು ಮಂದಿ ಬಂದಿದ್ದಾರೆ. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಬುದ್ಧ ಅವರನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು, ಏಕಾಏಕಿ ಬುದ್ಧ ಅವರನ್ನು ಹಿಡಿದು ಶರ್ಟ್ ಮತ್ತು ಪ್ಯಾಂಟ್ ಜೇಬಿಗೆ ಕೈ ಹಾಕಿ ಹುಡುಕಾಡಿದ್ದಾರೆ. ಈ ವೇಳೆ ಬುದ್ಧ ಅವರ ಬಳಿ ಕೇವಲ ನೂರು ರು. ಸಿಕ್ಕಿದೆ. ಅದನ್ನು ತೆಗೆದುಕೊಂಡು ಬಳಿಕ ಆತನ ಮೊಬೈಲ್ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಾರಕಾಸ್ತ್ರ ತೋರಿಸಿ ದರೋಡೆಕನ್ನಡಪ್ರಭ ವಾರ್ತೆ ಬೆಂಗಳೂರು
ಫುಡ್ ಡೆಲಿವರಿ ಬಾಯ್ಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಒಂದೂವರೆ ಸಾವಿರ ರು. ದರೋಡೆ ಮಾಡಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅಸ್ಸಾಂ ಮೂಲದ ಲಷ್ಕರ್ ಎಂಬಾತ ದರೋಡೆಗೆ ಒಳಗಾದ ಫುಡ್ ಡೆಲಿವರಿ ಬಾಯ್. ಪುಲಕೇಶಿನಗರದ ಪ್ರಾವಿನೆಂಟ್ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ 1ರ ಸುಮಾರಿಗೆ ಈ ಘಟನೆ ನಡೆದಿದೆ.
ಗ್ರಾಹರೊಬ್ಬರಿಗೆ ಆಹಾರ ಡೆಲಿವರಿ ನೀಡಲು ಲಷ್ಕರ್ ಪ್ರಾವಿಡೆಂಟ್ ರಸ್ತೆಗೆ ಬಂದಿದ್ದಾನೆ. ಈ ವೇಳೆ ಗ್ರಾಹಕನಿಗೆ ಕರೆ ಮಾಡಿ ಕಾಯುತ್ತಾ ನಿಂತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು, ಎಕಾಏಕಿ ಮಾರಕಾಸ್ತ್ರ ತೆಗೆದು ಲಷ್ಕರ್ನನ್ನು ಬೆದರಿಸಿ, ₹1,500 ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಸಂಬಂಧ ಲಷ್ಕರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪುಲಕೇಶಿನಗರ ಠಾಣೆ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.