ಸಚಿವೆ ನಿರ್ಮಲಾ ಹೆಸರಲ್ಲಿ ಸ್ತ್ರಿ ಸಂಘಗಳಿಂದ ಹಣ ಸುಲಿಗೆ

| Published : Feb 10 2024, 01:52 AM IST / Updated: Feb 10 2024, 07:47 AM IST

fraud

ಸಾರಾಂಶ

ಬೆಂಗಳೂರಿನ ಆನೇಕಲ್‌ನ ಸೂರ್ಯನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಸಚಿವೆ ನಿರ್ಮಲಾ ಅವರ ಹೆಸರಿನಲ್ಲಿ ಸ್ತ್ರಿ ಸಂಘಗಳಿಂದ ಹಣ ಸುಲಿಗೆ ಮಾಡಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡಸಲಾಗಿದೆ.

ಕನ್ನಡಪ್ರಭ ವಾರ್ತೆ ಆನೇಕಲ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿರುವ ಘಟನೆ ಆನೇಕಲ್ ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನೆರೆಯ ತಮಿಳುನಾಡಿನ ಹೊಸೂರು ಮೂಲದ ಪವಿತ್ರಾ ಜನರಿಗೆ ವಂಚಿಸಿದವರು. ತಮ್ಮ ಟ್ರಸ್ಟ್‌ಗೆ ನಿರ್ಮಲಾ ಸೀತಾರಾಮನ್ ಅವರಿಂದ ₹17,000 ಕೋಟಿ ಬಂದಿದೆ. ಈ ಹಣವನ್ನು ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಸಾಲ ನೀಡಬೇಕು. 

ತಲಾ ಗುಂಪಿಗೆ ₹10 ಲಕ್ಷ ಸಾಲ ನೀಡುತ್ತೇವೆ. ಇದರಲ್ಲಿ ₹5 ಲಕ್ಷ ಸಬ್ಸಿಡಿ ಎಂದು ನಂಬಿಸಿದರು. ಇದಕ್ಕಾಗಿ ಕೇಂದ್ರದಿಂದ ಹಣ ಸಂದಾಯ ಆಗಿರುವ ನಕಲಿ ಪ್ರಮಾಣಪತ್ರವನ್ನು ತಯಾರಿಸಿದ್ದರು.

ನಾವು ಹೊಸೂರಿನಲ್ಲಿ ಟ್ರಸ್ಟ್ ಆರಂಭಿಸಿದ್ದೇವೆ. ನಮ್ಮ ಟ್ರಸ್ಟ್‌ಗೆ ಕೇಂದ್ರ ಸರ್ಕಾರದಿಂದ ಹಣ ಬಂದಿದೆ. ಅಮೆರಿಕದಿಂದಲೂ ನಮ್ಮ ಟ್ರಸ್ಟ್‌ಗೆ ಹಣ ಸಂದಾಯ ಆಗಿದೆ ಎಂದು ಜನರಿಗೆ ಪವಿತ್ರಾ ಹೇಳುತ್ತಿದ್ದಳು. 

ಒಂದು ತಂಡವನ್ನು ಕಟ್ಟಿಕೊಂಡು ‘ನೀವು ಸಾಲ ಪಡೆಯಲು ಮುಂಚಿತವಾಗಿ ಸ್ವಲ್ಪ ಹಣ ಕಟ್ಟಬೇಕು’ ಎಂದು ನೂರಾರು ಜನ ಮಹಿಳೆಯರಿಂದ ₹5 ಸಾವಿರದಿಂದ ₹25 ಸಾವಿರದವರೆಗೆ ಹಣ ವಸೂಲಿ ಮಾಡಿದ್ದಳು. ಹಣ ಕಟ್ಟಿದವರು ಸಾಲ ಕೇಳಿದಾಗ ವಂಚಕೀಯ ನಾಟಕ ಬಟಾ ಬಯಲಾಗಿದೆ.

ಈಕೆಯ ವಿರುದ್ಧ ಆನೇಕಲ್, ಚಂದಾಪುರ, ಸೂರ್ಯನಗರ, ಹೊಸಕೋಟೆ, ಅತ್ತಿಬೆಲೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಪವಿತ್ರಾಳನ್ನು ಸೂರ್ಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.