ಸಾರಾಂಶ
ಸಾಲಬಾಧೆಯಿಂದ ರೈತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಗುಂಡಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಹಲಗೂರು : ಸಾಲಬಾಧೆಯಿಂದ ರೈತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಗುಂಡಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಗ್ರಾಮದ ನಿವಾಸಿ ಜಿ.ಬಿ.ನಂಜುಂಡಯ್ಯರ ಪುತ್ರ ಜಿ.ಎನ್.ನಂಜುಂಡಸ್ವಾಮಿ (27) ಮೃತ ವ್ಯಕ್ತಿ.
ತಂದೆಗೆ ಸೇರಿದ್ದ ಜಮೀನಿನಲ್ಲಿ ನಂಜುಂಡಸ್ವಾಮಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಕೃಷಿ ಚಟುವಟಿಕೆಗಳಿಗಾಗಿ ದಳವಾಯಿಕೋಡಿಹಳ್ಳಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ 80 ಸಾವಿರ ರು. ಸೇರಿದಂತೆ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸುಮಾರು, 6 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿದ್ದರು.
ಕೃಷಿ ಚಟುವಟಿಕೆಯಿಂದ ಸಾಲ ತೀರಿಸಲಾಗದೇ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಭಾನುವಾರ ಸಂಜೆ 4 ಗಂಟೆ ಸಮಯದಲ್ಲಿ ಮನೆ ಬಾಗಿಲು ಹಾಕಿದ್ದನ್ನು ಗಮನಿಸಿದ ಪತ್ನಿ ಎಚ್.ಎಸ್.ಪಲ್ಲವಿ ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ನೆರೆ ಹೊರೆ ಯವರ ಸಹಾಯದಿಂದ ಬಾಗಿಲು ಒಡೆದು ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪತ್ನಿ ಎಚ್.ಎಸ್.ಪಲ್ಲವಿ ದೂರು ದಾಖಲಿಸಿದ್ದಾರೆ.
ಸೋಮವಾರ ಮಳವಳ್ಳಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಮ್ಮ ನಿಧನ
ಹಲಗೂರು: ಸಮೀಪದ ಮಾರಗೌಡನಹಳ್ಳಿಯ ಚೆನ್ನಯ್ಯರ ಪತ್ನಿ ಜಯಮ್ಮ (58) ಅನಾರೋಗ್ಯದಿಂದ ಸೋಮವಾರ ನಿಧನರಾದರು. ಮೃತರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆಯಿತು.