ಸಾರಾಂಶ
ಅಣ್ಣೂರು ಗ್ರಾಮದ ಹೊರ ವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾರಿಸಲು ಬೋರ್ ವೆಲ್ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶ ಉಂಟಾಗಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಭಾರತೀನಗರ : ವಿದ್ಯುತ್ ಸ್ಪರ್ಶದಿಂದ ರೈತ ಸಾವನ್ನಪ್ಪಿರುವ ಘಟನೆ ಅಣ್ಣೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವು (35) ಸಾವನ್ನಪ್ಪಿದವರು.
ಬುಧವಾರ ಸಂಜೆ 5 ಗಂಟೆಯಲ್ಲಿ ಗ್ರಾಮದ ಹೊರ ವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾರಿಸಲು ಬೋರ್ ವೆಲ್ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶ ಉಂಟಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣ ಜಮೀನಿನ ಅಕ್ಕಪಕ್ಕದಲ್ಲಿದ್ದ ರೈತರು ಶಿವುನನ್ನು ಸ್ಥಳೀಯ ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತ ರಾತ್ರಿ 7.30ರ ಸಮಯದಲ್ಲಿ ಮೃತಪಟ್ಟಿದ್ದಾರೆ.
ಕೆ.ಎಂ.ದೊಡ್ಡಿ ಪೊಲೀಸಲು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಸೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕಾರು ಡಿಕ್ಕಿ: ಮೂವರಿಗೆ ಗಂಭೀರ ಗಾಯ
ಭಾರತೀನಗರ:ತಡೆಗೋಡೆಗೆ ಕಾರು ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಚಿಕ್ಕರಸಿನಕೆರೆ ಗೇಟ್ ಬಳಿ ನಡೆದಿದೆ.
ಬೆಂಗಳೂರು ಮೂಲದ ಸಂತೋಷ್ ಕುಮಾರ್ (29), ಕಾರ್ತಿಕ್ (34), ರಾಕೇಶ್(35) ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯ ಚಿಕ್ಕರಸಿನಕೆರೆ ಗೇಟ್ ಬಳಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ತಡೆಗೋಡೆ ಇಲ್ಲದಿದ್ದರೆ ಹೆಬ್ಬಾಳಕ್ಕೆ ಕಾರು ಪಲ್ಟಿಯಾಗಿ ಭಾರೀ ಅನಾಹುತ ಸಂಭವಿಸುತ್ತಿತ್ತು. ತಡೆಗೋಡೆ ಇದಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರನ್ನು ಸ್ಥಳೀಯರು ಕೆ.ಎಂ.ದೊಡ್ಡಿ ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗೂಳಿ ತಿವಿದು ಸ್ಥಳದಲ್ಲೇ ವ್ಯಕ್ತಿ ಸಾವು
ಶ್ರೀರಂಗಪಟ್ಟಣ : ಕೊಟ್ಟಿಗೆಯಿಂದ ಹೊರಗಡೆ ಕಟ್ಟುವ ವೇಳೆ ಗೂಳಿ ತಿವಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಹದೇವಪುರ ಗ್ರಾಮದ ಬಳಿ ನಡೆದಿದೆ.
ಯಳಂದೂರು ತಾಲೂಕಿನ ಹನೂರು ಗ್ರಾಮದ ಲೇಟ್ ಗೂಳಿ ನಂಜಯ್ಯ ಅವರ ಮಗ ರಂಗಯ್ಯ (೬೦) ಗೂಳಿ ತಿವಿತಕ್ಕೊಳಗಾಗಿ ಸಾವನ್ನಪ್ಪಿರುವ ವ್ಯಕ್ತಿ. ಮೃತ ರಂಗಯ್ಯ ಮಹದೇವಪುರ ಗ್ರಾಮದ ಬಳಿಯ ನಮಿತ್ ವರ್ಮಾ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದನು. ಅದೇ ತೋಟದಲ್ಲಿ ಸಾಕಲಾಗಿದ್ದ ಗೂಳಿಯನ್ನು ಎಂದಿನಂತೆ ಕೊಟ್ಟಿಗೆಯಿಂದ ಹೊರಗಡೆ ಕಟ್ಟುವ ವೇಳೆ ಗೂಳಿ ತಿವಿದು ಮೃತಪಟ್ಟಿದ್ದಾನೆ. ಈ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.