ಸಾರಾಂಶ
ಮರಳು ಗಣಿಗಾರಿಕೆ ಅಡ್ಡೆ ಮೇಲೆ ತಹಸೀಲ್ದಾರ್ ನಿಸರ್ಗಪ್ರಿಯ ದಿಢೀರ್ ದಾಳಿ ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಮರಳು ಅಡ್ಡೆ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ತಹಸೀಲ್ದಾರ್ ನಿಸರ್ಗಪ್ರಿಯ ನೇತೃತ್ವದ ಕಂದಾಯ ಇಲಾಖೆ ಸಿಬ್ಬಂದಿ ತಂಡ ಇಬ್ಬರನ್ನು ಬಂಧಿಸಿ ಪೊಲೀಸರ ವಶಕ್ಕೆ ನೀಡಿದ್ದು, ಮರಳು ಸಾಗಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಮತ್ತು ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದಾರೆ.ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕೂಡಲಕುಪ್ಪೆ ಬಳಿ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಮಂಗಳವಾರ ರಾತ್ರಿ 10 ಗಂಟೆ ಸಮಯದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ ದಿಢೀರ್ ದಾಳಿ ನಡೆಸಿದರು. ಈ ವೇಳೆ ಮರಳು ಸಾಗಿಸುತ್ತಿದ್ದ ಪಿಡಿಜಿ ಕೊಪ್ಪಲು ಗ್ರಾಮದ ಟ್ರ್ಯಾಕ್ಟರ್ ಮಾಲೀಕ ರಘು ಮತ್ತು ಅವನ ಒಬ್ಬ ಸಹಚರ ಸ್ಥಳದಲ್ಲಿಯೇ ಮಾಲು ಸಮೇತ ಸಿಕ್ಕಿಬಿದ್ದರು.
ನದಿ ದಡದಲ್ಲಿ ಸಂಗ್ರಹಿಸಲಾಗಿದ್ದ ಮರಳು ಗುಡ್ಡೆಯಲ್ಲಿ ಒಂದಷ್ಟನ್ನು ಸೀಸ್ ಮಾಡಿ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸುರಿಸಲಾಗಿದೆ. ಇನ್ನು ಉಳಿದ ಮರಳನ್ನು ನದಿಗೆ ತಳ್ಳಿಸಲಾಗಿದೆ ಎಂದು ತಹಸೀಲ್ದಾರ್ ನಿಸರ್ಗಪ್ರಿಯ ತಿಳಿಸಿದ್ದಾರೆ.ತಾಲೂಕಿನ ಬಹುತೇಕ ಕಡೆ ಹೇಮಾವತಿ ನದಿ ಮತ್ತು ಕೆರೆ ಬಯಲಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ತಾಲೂಕು ಆಡಳಿತದ ಗಮನಕ್ಕೆ ಬಂದಿದೆ. ಫಿಲ್ಟರ್ ಮರಳು ದಂದೆ ಕೋರರಿಂದ ಕೆರೆಗಳು ಹಾಲಾಗುತ್ತಿದೆ. ರಾಸುಗಳ ಕುಡಿಯುವ ನೀರು ಮಲೀನಗೊಳ್ಳುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯ ಮೇಲೆ ತಾಲೂಕು ಆಡಳಿತ ಸಮರ ಸಾರಿದ್ದು ಅಕ್ರಮ ಮರಳು ದಂದೆಕೋರರನ್ನು ನಿರ್ಧಾಕ್ಷಿಣ್ಯವಾಗಿ ಮಟ್ಟ ಹಾಕಲಾಗುವುದೆಂದು ತಹಸೀಲ್ದಾರ್ ನಿಸರ್ಗಪ್ರಿಯ ತಿಳಿಸಿದ್ದಾರೆ.13ಕೆಎಂಎನ್ ಡಿ15
ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಮರ್ಳು ಸಮೇತ ವಶಪಡಿಸಿಕೊಂಡಿರುವ ತಹಸೀಲ್ದಾರ್ ನಿಸರ್ಗಪ್ರಿಯ.