ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಸೀಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಮಾಹಿತಿದಾರರಿಗೆ ನೀಡದ ಪ್ರಕರಣದಲ್ಲಿ ಹಿಂದಿನ ಜಿಲ್ಲಾ ಆರಕ್ಷಕ ಅಧೀಕ್ಷಕ ಎನ್.ಯತೀಶ್ ಹಾಗೂ ಮಳವಳ್ಳಿ ಡಿವೈಎಸ್ಪಿಯಾಗಿದ್ದ ನವೀನ್ಕುಮಾರ್ ಅವರಿಗೆ ಸಂಕಷ್ಟ ಎದುರಾಗಿದೆ.ಈ ಇಬ್ಬರು ಅಧಿಕಾರಿಗಳ ವಿರುದ್ಧ ಎಂ.ಆರ್.ನಾಗರಾಜು ಅವರು ಕರ್ನಾಟಕ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಬೇಕು ಹಾಗೂ ತೆಗೆದುಕೊಂಡ ಶಿಸ್ತು ಕ್ರಮದ ದಾಖಲೆಗಳೊಂದಿಗೆ ಅನುಪಾಲನಾ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ರಾಜ್ಯ ಆರಕ್ಷಕ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಆದೇಶಿಸಿದ್ದಾರೆ.
ಪ್ರಕರಣವೇನು?ಮಳವಳ್ಳಿ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಆಸಿಫ್ ಅಹಮದ್ ಅವರು ಮಳವಳ್ಳಿ ತಾಲೂಕಿನಲ್ಲಿ ಗಿಡಗಳನ್ನು ನೆಡದೆ ಎಫ್ಓಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪಿಸಿ ಎಂ.ಆರ್.ನಾಗರಾಜು ಅವರು ಮೈಸೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದರು. ಇದರನ್ವಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಡ್ಯದ ಡಿಸಿಎಫ್, ಎಸಿಎಫ್, ಆರ್ಎಫ್ಒ, ಡಿಆರ್ಎಫ್ಒ, ಗಾರ್ಡ್ಗಳನ್ನು ಕರೆಸಿ ವಿಚಾರಣೆ ನಡೆಸಿದ್ದರು ಎಂದು ಗೊತ್ತಾಗಿದೆ.
ಇದರಿಂದ ಕೋಪಗೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ದೂರುದಾರ ಎಂ.ಆರ್.ನಾಗರಾಜು ವಿರುದ್ಧ ಸೇಡು ತೀರಿಸಿಕೊಳ್ಳಲು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ರಾಜೇಶ್ ಅವರು ನಾಗರಾಜುಗೆ ಕರೆ ಮಾಡಿ ಅರಣ್ಯಾಧಿಕಾರಿಗಳ ವಿರುದ್ಧದ ದೂರನ್ನು ವಾಪಸ್ ತೆಗೆದುಕೊಳ್ಳುವಂತೆ ಸೂಚಿಸಿದರೆಂದು ಆರೋಪಿಸಲಾಗಿದೆ. ಅದಕ್ಕೆ ನಾಗರಾಜು ಒಪ್ಪಿರಲಿಲ್ಲ. ಕೊನೆಗೆ ಅವರನ್ನು ಠಾಣೆಗೆ ಬರುವಂತೆ ಸೂಚಿಸಿದ್ದರು. ಸ್ನೇಹಿತರೊಬ್ಬರ ಬುಲೆಟ್ನಲ್ಲಿ ನಾಗರಾಜು ಠಾಣೆಗೆ ಆಗಮಿಸಿದಾಗ ಬುಲೆಟ್ನ್ನು ವಶಕ್ಕೆ ತೆಗೆದುಕೊಂಡರು. ನ್ಯಾಯಾಲಯದಲ್ಲಿ ಬಿಡಿಸಿಕೊಳ್ಳುವಂತೆ ಹೇಳಿ ವಾಪಸ್ ಕಳುಹಿಸಿದರು. ಬುಲೆಟ್ಗಾಗಿ ಠಾಣೆಗೆ ಎಷ್ಟೇ ದಿನ ಅಲೆದಾಡಿದರೂ ಕೊಡಲಿಲ್ಲ ಎಂದು ದೂರುದಾರರು ಆರೋಪಿಸಿದ್ದರು.
ಕಾನೂನಾತ್ಮಕವಾಗಿಯೇ ಬುಲೆಟ್ ಬಿಡಿಸಿಕೊಳ್ಳಲು ಮುಂದಾದ ನಾಗರಾಜು ಅವರು ಮಳವಳ್ಳಿ ಗ್ರಾಮಾಂತರ ಠಾಣೆಯ ಸೀಸಿ ಟೀವಿ ದೃಶ್ಯಾವಳಿಗಳನ್ನು ನೀಡುವಂತೆ ಮಾಹಿತಿ ಹಕ್ಕು ನಿಯಮದಡಿ ಕೋರಿದರು. ಅಂದಿನ ಡಿವೈಎಸ್ಪಿಯಾಗಿದ್ದ ನವೀನ್ಕುಮಾರ್ ಅವರು ಈ ಅರ್ಜಿಯನ್ನು ಮಾಹಿತಿ ಹಕ್ಕು ಕಾಯ್ದೆ ಕಲಂ ೬(೩)ರಡಿ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸದೆ ಮೇಲ್ಮನವಿದಾರರಿಗೆ ಕಾಯ್ದೆಯ ಕಲಂ ೮(೧)ರಡಿಯಲ್ಲಿ ಮಾಹಿತಿಯನ್ನು ಒದಗಿಸಲು ಬರುವುದಿಲ್ಲವೆಂದು ತಪ್ಪಾದ ಹಿಂಬರಹವನ್ನು ನೀಡಿ ಮಾಹಿತಿ ಹಕ್ಕು ಕಾಯಿದೆಯನ್ನು ಉಲ್ಲಂಘಿಸಿದ್ದರು.
ಈ ಪ್ರಕರಣದಲ್ಲಿ ಅಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಎನ್.ಯತೀಶ್ ಅವರು ಪ್ರಥಮ ಮೇಲ್ಮನವಿ ಅರ್ಜಿಯನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸದೆ ತಮ್ಮ ಕಚೇರಿಯ ದೈನಂದಿನ ವ್ಯವಹಾರದಂತೆ ವ್ಯವಹರಿಸಿರುವುದನ್ನು ರಾಜ್ಯ ಮಾಹಿತಿ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ.ಇಬ್ಬರು ಅಧಿಕಾರಿಗಳ ವಿರುದ್ಧ ಕೆಸಿಎಸ್ಆರ್ ನಿಯಮಾವಳಿಯ ಅಡಿಯಲ್ಲಿ ಇಲಾಖಾ ವಿಚಾರಣೆಯನ್ನು ನಡೆಸುವುದು ಹಾಗೂ ಶಿಸ್ತುಕ್ರಮ ಕೈಗೊಳ್ಳಬೇಕು. ತೆಗೆದುಕೊಂಡ ಶಿಸ್ತು ಕ್ರಮದ ದಾಖಲೆಗಳೊಂದಿಗೆ ಅನುಪಾಲನಾ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರೀಕ್ಷಕ ಡಾ.ಎಂ.ಎ.ಸಲೀಂ ಅವರಿಗೆ ನಿರ್ದೇಶನ ನೀಡಿದ್ದಾರೆ.
ನಾಗರಾಜು ಅವರು ಕೋರಿರುವ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಕಲಂ ೭(೬)ರನ್ವಯ ೩೦ ದಿನಗಳೊಳಗೆ ಉಚಿತವಾಗಿ ನೋಂದಾಯಿತ ಅಂಚೆ ಸ್ವೀಕೃತಿ ಮುಖಾಂತರ ದೃಢೀಕರಿಸಿದ ಮಾಹಿತಿಯನ್ನು ಮೇಲ್ಮನವಿದಾರರಿಗೆ ಒದಗಿಸಬೇಕು. ಮುಂದಿನ ವಿಚಾರಣೆ ದಿನಾಂಕದಂದು ಖುದ್ದು ವಿಚಾರಣೆಯಲ್ಲಿ ಹಾಜರಿದ್ದು ಆಯೋಗಕ್ಕೆ ವರದಿ ಸಲ್ಲಿಸುವಂತೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಬಸವರಾಜು ಅವರಿಗೆ ನಿರ್ದೇಶನ ನೀಡಿದ್ದಾರೆ.ಮಾಹಿತಿ ಹಕ್ಕು ಕಾಯ್ದೆಯನ್ನು ಯಾರೇ ಆಗಲೀ ಉಲ್ಲಂಘಿಸಬಾರದು. ಉಲ್ಲಂಘಿಸುವವರಿಗೆ ರಾಜ್ಯ ಮಾಹಿತಿ ಆಯುಕ್ತರ ಆದೇಶ ಒಂದು ಪಾಠ. ಪೊಲೀಸ್ ಠಾಣೆಗೆ ಬರುವ ಜನರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಮಾಹಿತಿಹಕ್ಕು ಕಾಯ್ದೆಯ ಮಾಹಿತಿಯನ್ನು ನಿಗದಿತ ಕಾಲಮಿತಿಯೊಳಗೆ ನೀಡಿ ಸಹಕರಿಸಬೇಕು. ಈ ಪ್ರಕರಣದಲ್ಲಿ ಡಾ.ಎಂ.ಎ.ಸಲೀಂ ಅವರು ತುರ್ತು ಕ್ರಮ ವಹಿಸುವಂತೆ ಮನವಿ ಮಾಡುತ್ತೇನೆ.
- ಎಂ.ಆರ್.ನಾಗರಾಜು, ದೂರುದಾರ