ಸಾರಾಂಶ
ಜ್ಯುವೆಲ್ಲರಿ ಅಂಗಡಿಯ ಮಾಲೀಕನಿಗೆ ಪಿಸ್ತೂಲ್ನಿಂದ ಬೆದರಿಸಿ 180 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಜ್ಯುವೆಲ್ಲರಿ ಅಂಗಡಿಯ ಮಾಲೀಕನಿಗೆ ಪಿಸ್ತೂಲ್ನಿಂದ ಬೆದರಿಸಿ 180 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಾಚೋಹಳ್ಳಿ ಗೇಟ್ ಸಮೀಪದ ಭೈರವೇಶ್ವರ ಕಾಂಪ್ಲೆಕ್ಸ್ನಲ್ಲಿರುವ ರಾಮ್ ಜ್ಯುವೆಲರ್ಸ್ ಅಂಗಡಿಯ ಮಾಲೀಕರು ಗುರುವಾರ ರಾತ್ರಿ 8.30ರ ಸುಮಾರಿನಲ್ಲಿ ಅಂಗಡಿ ಬಾಗಿಲು ಹಾಕಲು ಚಿನ್ನಾಭರಣಗಳನ್ನು ತೆಗೆದಿಡುತ್ತಿದ್ದರು. ಆ ಸಮಯದಲ್ಲಿ ಮೂವರು ಮುಸುಕುಧಾರಿ ದರೋಡೆಕೋರರು ಅಂಗಡಿಯೊಳಗೆ ನುಗ್ಗಿ ಪಿಸ್ತೂಲಿನಿಂದ ಅವರನ್ನು ಬೆದರಿಸಿ 180 ಗ್ರಾಂ ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡಿದ್ದಾರೆ. ದರೋಡೆಕೋರರಿಂದ ಭಯಭೀತರಾಗಿ ಮಾಲೀಕರು ಕಿರುಚಾಡುತ್ತಿದ್ದುದ್ದನ್ನು ಕೇಳಿ ಪಕ್ಕದ ಅಂಗಡಿಯ ಹುಡುಗರು ಬರುತ್ತಿದ್ದಂತೆ ದರೋಡೆಕೋರರು ಮಾಲೀಕ ಹಾಗೂ ಹುಡುಗರನ್ನು ತಳ್ಳಿಕೊಂಡು ಪರಾರಿಯಾಗಿದ್ದಾರೆ.ತಕ್ಷಣ ಜ್ಯುವೆಲ್ಲರಿ ಅಂಗಡಿ ಮಾಲೀಕರು ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿಯನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಗಡಿಯ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಮೂವರು ದರೋಡೆಕೋರರು ಆಟಿಕೆ ಪಿಸ್ತೂಲ್ ತೋರಿಸಿ ಆಭರಣ ದೋಚಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದರೋಡೆಕೋರರ ದೃಶ್ಯಾವಳಿ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ದರೋಡೆಕೋರರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಳೆದ ವರ್ಷ ಇದೇ ರೀತಿ ಬ್ಯಾಡರಹಳ್ಳಿ, ಕೋಡಿಗೆಹಳ್ಳಿ, ಕೆಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಜ್ಯುವೆಲ್ಲರಿ ಅಂಗಡಿಗಳ ದರೋಡೆ ನಡೆದಿದ್ದವು.