ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಆದಿತ್ಯ ಬೋಸ್ಲೆ, ಕೇರಳದ ಶೌರ್ಯ ಅಗರ್‌ವಾಲ್‌, ಬಿಹಾರದ ನಿಕುಂಜಿ ಮತ್ತು ಜಯನಗರ ನಿವಾಸಿ ಸೈಯದ್‌ ಬಿಲಾಲ್‌ ಬಂಧಿತರು. ಆರೋಪಿಗಳು ಏ.11ರಂದು ರಾತ್ರಿ ಒಡಿಶಾ ಮೂಲದ ವೃಷಬ್‌ ಮೊಹಾಂತಿಯನ್ನು ಅಪಹರಿಸಿ ಸೈಯದ್‌ ಬಿಲಾಲ್‌ ಮನೆಯಲ್ಲಿ ಇರಿಸಿದ್ದರು. ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣಕ್ಕಾಗಿ ಕಿಡ್ನಾಪ್‌:

ಆರೋಪಿಗಳ ಪೈಕಿ ಆದಿತ್ಯ ಬೋಸ್ಲೆ ಈಗಾಗಲೇ ಪದವಿ ಮುಗಿಸಿದ್ದು, ಇತರೆ ಆರೋಪಿಗಳು ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯ ಕಾಲೇಜಿನಲ್ಲಿಯೇ ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ವೃಷಭ್ ಮೊಹಾಂತಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಬಿಟಿಎಂ ಲೇಔಟ್‌ನ ಹಾಸ್ಟೆಲ್‌ನಲ್ಲಿದ್ದಾನೆ. ಈತನ ಬಳಿ ಹಣ ಇರುವ ಮಾಹಿತಿ ತಿಳಿದು ಏ.11ರಂದು ರಾತ್ರಿ ಹಾಸ್ಟೆಲ್‌ನಿಂದ ವೃಷಭ್‌ನನ್ನು ಅಪಹರಿಸಿ, ನಿಕುಂಜಿಯ ಕಾರಿನಲ್ಲಿ ಕರೆದೊಯ್ದಿದ್ದಾರೆ. ನಂತರ ಜಯನಗರದಲ್ಲಿರುವ ಸೈಯದ್‌ ಬಿಲಾಲ್‌ ಮನೆಯಲ್ಲಿ ಇರಿಸಿ, ಹಲ್ಲೆ ನಡೆಸಿದ್ದಾರೆ. ಬಳಿಕ ಲಕ್ಷಾಂತರ ರು. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮತ್ತೊಂದೆಡೆ ಹಾಸ್ಟೆಲ್‌ನ ಇತರೆ ವಿದ್ಯಾರ್ಥಿಗಳು ಸ್ನೇಹಿತನ ಅಪಹರಣ ಕಂಡು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಐಷಾರಾಮಿ ಜೀವನ ನಡೆಸಲು ಅಪಹರಣ

ಮಾಹಿತಿಯ ಹಿನ್ನೆಲೆಯಲ್ಲಿ ಮಡಿವಾಳ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಪಹರಣಕಾರರ ಬಗ್ಗೆ ಮಾಹಿತಿ ಕಲೆ ಹಾಕಿ, ಅವರ ಮೊಬೈಲ್ ಲೊಕೇಷನ್ ಆಧರಿಸಿ ಘಟನೆ ನಡೆದ ಕೆಲವೇ ಗಂಟೆಯೊಳಗೆ ವಿದ್ಯಾರ್ಥಿಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಐಷಾರಾಮಿ ಜೀವನ ನಡೆಸಲು ಸ್ನೇಹಿತನನ್ನೇ ಅಪಹರಿಸಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.