ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ : ಯುವಕರಿಗೆ ಕನ್ಯೆ ಸಿಗದೇ ಮದುವೆಯಾಗುವ ವಯಸ್ಸು ಮುಗಿಯುತ್ತಿದೆ. ಹೀಗೆ ಎದುರಾದ ಕನ್ಯಾ ಅಭಾವದಿಂದ ಮಕ್ಕಳ (ಅಪ್ರಾಪ್ತ ಬಾಲಕಿಯರು) ಕೊರಳಿಗೆ ಮಾಂಗಲ್ಯ ಬೀಳುತ್ತಿದೆ!
ಹೌದು..ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಅಪ್ರಾಪ್ತರು ನಮ್ಮನ್ನು ಬಾಲ್ಯ ವಿವಾಹದಿಂದ ಕಾಪಾಡಿ ಎಂದು ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿ ಅಧಿಕಾರಿಗಳ ಬಳಿ ಅಲವತ್ತುಕೊಂಡಿದ್ದಾರೆ. ಆದರೆ, ಅವರಿಗೆ ಸ್ಪಂದಿಸುವಷ್ಟು ಸಿಬ್ಬಂದಿಗಳೇ ಇಲ್ಲ. ಇವು ಬಾಲ್ಯ ವಿವಾಹ ತಡೆಯಲು ಮಾಡುತ್ತಿರುವ ಮನವಿಯಾದರೆ, ಅರಿವು ಇಲ್ಲದೆ ಅನೇಕ ಬಾಲ್ಯವಿವಾಹದ ಪ್ರಕರಣಗಳು ನಡೆದಿವೆ.
160 ಮಕ್ಕಳು ಪಾರು:
2025ರಲ್ಲಿಯೇ ಕೊಪ್ಪಳ ಜಿಲ್ಲಾದ್ಯಂತ 160 ಮಕ್ಕಳು ಬಾಲ್ಯವಿವಾಹದಿಂದ ನಮ್ಮನ್ನು ಕಾಪಾಡಿ ಎಂದು ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿದ್ದಾರೆ. ಪ್ರತಿ ತಿಂಗಳು ಹತ್ತಾರು ಪ್ರಕರಣದಲ್ಲಿ ಮಕ್ಕಳನ್ನು ಬಾಲಕಿಯರ ಬಾಲಮಂದರಲ್ಲಿ ಇರಿಸಿ ಪಾಲಕರನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿಕೊಡಲಾಗಿದೆ. ಕೆಲ ಪ್ರಕರಣದಲ್ಲಿ ಪಾಲಕರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆ ನಡೆದಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 7 ಬಾಲ್ಯ ವಿವಾಹವಾಗಿದೆ. ಇದನ್ನು ತಡೆಯಲು ಜಿಲ್ಲಾಧಿಕಾರಿ ನಳಿನ್ ಅತುಲ್, ಕಠಿಣ ಕ್ರಮಕೈಗೊಂಡಿದ್ದು, ಬಾಲ್ಯವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಸಹೋದರನಿಗೆ ಮಗಳು ಕೊಟ್ಟ ಅಕ್ಕ:
ಬಹುತೇಕ ಪ್ರಕರಣದಲ್ಲಿ ವಯಸ್ಸಾದರೂ ತಮ್ಮನಿಗೆ ಎಲ್ಲಿಯೂ ಕನ್ಯೆ ಸಿಗುತ್ತಿಲ್ಲ ಎಂದು ಅಕ್ಕನೇ ಅಪ್ರಾಪ್ತ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ಗಂಗಾವತಿ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ನಡೆದಿರುವ ಪ್ರಕರಣವೂ ಇದೇ ರೀತಿಯಾಗಿದೆ. ಈ ಕುರಿತು ಎಫ್ಐಆರ್ ದಾಖಲಿಸಲು ಮಕ್ಕಳ ಕಲ್ಯಾಣ ಸಮಿತಿ ಮಕ್ಕಳ ರಕ್ಷಣಾ ಘಟಕಕ್ಕೆ ಸೂಕ್ತ ದಾಖಲೆ ಒದಗಿಸಿದೆ.
ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 3 ಪ್ರಕರಣಗಳು ನಡೆದಿದ್ದು ಜಿಲ್ಲಾಡಳಿತ ಎಫ್ಐಆರ್ ದಾಖಲಿಸಲು ಮುಂದಾಗಿದೆ. ಇದರಲ್ಲಿ ಎರಡು ಬಾಲ್ಯವಿವಾಹ, ಮತ್ತೊಂದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ತಿಂಗಳು 14 ಬಾಲಕಿಯರಿಂದ ಕರೆ ಬಾಲ್ಯವಿವಾಹದಿಂದ ನನ್ನ ಗೆಳತಿ ಹಾಗೂ ನನ್ನನ್ನು ಪಾರು ಮಾಡಿ ಎಂದು ಮಕ್ಕಳ ಸಹಾಯವಾಣಿಗೆ ನಿತ್ಯವೂ ಕರೆ ಬರುತ್ತಿವೆ. ಏಪ್ರಿಲ್ ತಿಂಗಳಲ್ಲಿಯೇ 14 ಪ್ರಕರಣ ನಡೆದಿದ್ದು ಬಹುತೇಕರನ್ನು ರಕ್ಷಿಸಲಾಗಿದೆ. ಇದಲ್ಲದೆ ಮಕ್ಕಳ ರಕ್ಷಣಾ ಘಟಕಕ್ಕೂ ಕರೆಗಳು ಬರುತ್ತಿವೆ. ಕಚೇರಿಗೆ ಬಂದು ಮಾಹಿತಿ ನೀಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ
ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಮಾಹಿತಿ ಬರುತ್ತಿದ್ದು ತಡೆಯುವ ಪ್ರಯತ್ನ ನಡೆದಿದೆ. ವರ್ಷವೊಂದರಲ್ಲಿಯೇ 160ಕ್ಕೂ ಹೆಚ್ಚು ಬಾಲ್ಯ ವಿವಾಹಕ್ಕೆ ಸಿದ್ಧತೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅಗತ್ಯ ಕ್ರಮಕೈಗೊಂಡು ತಡೆಯಲಾಗುತ್ತಿದೆ.
-ಮಹಾಂತೇಶ ಸ್ವಾಮೀಜಿ ಪೂಜಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೊಪ್ಪಳ
ಬಾಲ್ಯ ವಿವಾಹ ತಡೆಯುವಂತೆ ಬರುತ್ತಿರುವ ಮನವಿಗೆ ಸ್ಪಂದಿಸಿ, ಅವರ ಪಾಲಕರನ್ನು ಕರೆಸಿ ಬುದ್ಧಿ ಹೇಳಿ ಕಳಿಸಿಕೊಡಲಾಗಿದೆ. ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೇವೆ.
ಪ್ರಕಾಶ, ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ