ಸಾರಾಂಶ
ಮಂಡ್ಯ : ತಾಯಿಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡಿದನೆಂಬ ಕಾರಣಕ್ಕೆ ಸ್ನೇಹಿತನ ತಲೆಯನ್ನು ಕಡಿದು ತಂದ ಆರೋಪಿಗೆ ಎರಡನೇ ಆಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಳವಳ್ಳಿ ತಾಲೂಕು ಬಿ.ಜಿ.ಪುರ ಹೋಬಳಿ ಚಿಕ್ಕಬಾಗಿಲು ಗ್ರಾಮದ ಪಶುಪತಿ ಶಿಕ್ಷೆಗೊಳಗಾದ ಅಪರಾಧಿ. ಈತನ ಸ್ನೇಹಿತ ಗಿರೀಶ್ ಕೊಲೆಯಾದ ವ್ಯಕ್ತಿ. ಪಶುಪತಿಯೊಂದಿಗೆ ಗಿರೀಶ್ ಮನೆಗೆ ಬಂದಿದ್ದ ವೇಳೆ ತನ್ನ ತಾಯಿಯನ್ನು ನೋಡಿ ಕೆಟ್ಟ ರೀತಿಯಲ್ಲಿ ಸನ್ನೆ ಮಾಡಿದನೆಂದು ಭಾವಿಸಿ ಆತನ ಮೇಲೆ ದ್ವೇಷ ಸಾಧಿಸುತ್ತಿದ್ದನು.
೨೯.೯.೨೦೧೮ರಂದು ಜಮೀನಿನ ಬಳಿ ಕೆಲಸ ಮಾಡಲು ಜೊತೆಯಲ್ಲಿ ಕೊಡಲಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಮಹದೇವನ ಕೈಯ್ಯಲ್ಲಿದ್ದ ಕೊಡಲಿಯನ್ನು ಕಿತ್ತುಕೊಂಡು ಏಕಾಏಕಿ ಗಿರೀಶನ ತಲೆಯನ್ನು ಕತ್ತರಿಸಿದ್ದನು. ನಂತರ ಮೋಟಾರ್ ಸೈಕಲ್ನ ಪೆಟ್ರೋಲ್ ಟ್ಯಾಂಕ್ ಮೇಲಿಟ್ಟುಕೊಂಡು ಹಗಲು ವೇಳೆಯೇ ಸಾರ್ವಜನಿಕರು ಬೆಚ್ಚಿ ಬೀಳುವಂತೆ ರಾಜಾರೋಷವಾಗಿ ಮಳವಳ್ಳಿ ಪುರ ಠಾಣೆಗೆ ಸ್ವತಃ ಹಾಜರಾಗಿ ಕೃತ್ಯ ಒಪ್ಪಿಕೊಂಡಿದ್ದನು.
ಈ ಬಗ್ಗೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಮಳವಳ್ಳಿ ಗ್ರಾಮಾಂತರ ವೃತ್ತ ನಿರೀಕ್ಷಕ ಆರ್.ಶ್ರೀಕಾಂತ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ೨ ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕಿ ಎನ್.ಬಿ.ವಿಜಯಲಕ್ಷ್ಮೀ ವಾದ ಮಂಡಿಸಿದ್ದರು.