ಅಪರಾಧ ಪ್ರಕರಣವೊಂದರ ವಿಚಾರಣೆ ವೇಳೆ ಲಾಕಪ್‌ ಡೆತ್‌ : 4 ಪೋಲಿಸರಿಗೆ 7 ವರ್ಷ ಶಿಕ್ಷೆ

| Published : Nov 28 2024, 12:32 AM IST / Updated: Nov 28 2024, 05:19 AM IST

ಸಾರಾಂಶ

ಅಪರಾಧ ಪ್ರಕರಣವೊಂದರ ವಿಚಾರಣೆ ವೇಳೆ ದೈಹಿಕವಾಗಿ ಹಲ್ಲೆ ನಡೆಸಿ ವ್ಯಕ್ತಿಯೋರ್ವನ ಸಾವಿಗೆ ಕಾರಣವಾದ ಆರೋಪದಲ್ಲಿ ನಾಲ್ವರು ಪೊಲೀಸರಿಗೆ 7 ವರ್ಷ ಶಿಕ್ಷೆ ವಿಧಿಸಿ ನಗರದ 51ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

 ಬೆಂಗಳೂರು: ಅಪರಾಧ ಪ್ರಕರಣವೊಂದರ ವಿಚಾರಣೆ ವೇಳೆ ದೈಹಿಕವಾಗಿ ಹಲ್ಲೆ ನಡೆಸಿ ವ್ಯಕ್ತಿಯೋರ್ವನ ಸಾವಿಗೆ ಕಾರಣವಾದ ಆರೋಪದಲ್ಲಿ ನಾಲ್ವರು ಪೊಲೀಸರಿಗೆ 7 ವರ್ಷ ಶಿಕ್ಷೆ ವಿಧಿಸಿ ನಗರದ 51ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಹಲಸೂರು ಸಂಚಾರ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಏಜಾಜ್‌ ಖಾನ್‌, ರಾಮಮೂರ್ತಿನಗರ ಠಾಣೆಯ ಪೇದೆ ಕೇಶವಮೂರ್ತಿ, ಇಂದಿರಾನಗರ ಸಂಚಾರ ಠಾಣೆಯ ಪೇದೆಗಳಾದ ಮೋಹನ್‌ ರಾಮ್‌, ಇಂದಿರಾ ನಗರ ಪೊಲೀಸ್‌ ಠಾಣೆಯ ಸಿದ್ದಪ್ಪ ಬೊಮ್ಮನಹಳ್ಳಿ ಅವರು ಶಿಕ್ಷೆಗೆ ಒಳಗಾದವರು.

ಈ ನಾಲ್ವರು ಅಪರಾಧಿಗಳಿಗೆ ಉದ್ದೇಶಪೂರ್ವಕವಲ್ಲದೆ ಕೊಲೆ ಅಪರಾಧಕ್ಕೆ 7 ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ, ತಪ್ಪೊಪ್ಪಿಕೊಳ್ಳಲು ತೊಂದರೆ ನೀಡಿದ ಅಪರಾಧಕ್ಕೆ 5 ವರ್ಷ ಸಾಧಾರಣ ಜೈಲು ಹಾಗೂ ₹25 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಯಶವಂತಕುಮಾರ ಆದೇಶ ಮಾಡಿದ್ದಾರೆ.

ಅಲ್ಲದೆ, ದಂಡ ಪಾವತಿಸಲು ವಿಫಲವಾದರೆ ಈ ಎಲ್ಲ ಅಪರಾಧಿಗಳು ಮತ್ತೊಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಎಲ್ಲ ಜೈಲು ಶಿಕ್ಷೆಯ ಅವಧಿಯು ಏಕಕಾಲಕ್ಕೆ ಅನ್ವಯಿಸಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇನ್ನೂ ದಂಡ ಮೊತ್ತದಲ್ಲಿ ಪ್ರತಿ ಆರೋಪಿಯೂ ತಲಾ ₹ 50 ಸಾವಿರ ಹಣವನ್ನು (ಒಟ್ಟಾರೆ 2 ಲಕ್ಷ ಹಣ) ಮೃತ ಮಹೇಂದ್ರ ರಾಥೋಡ್‌ ಅಲವಂಬಿತರಿಗೆ ಪಾವತಿಸಬೇಕು. ಸಂತ್ರಸ್ತರ ಪರಿಹಾರ ಯೋಜನೆ-2011ರ ಅಡಿಯಲ್ಲಿ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪರಿಹಾರ ನಿರ್ಧರಿಸಿ, ಆ ಮೊತ್ತವನ್ನು ಮೃತನ ಅವಲಂಬಿತರಿಗೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ.

ಪ್ರಕರಣದ ಹಿನ್ನೆಲೆ: 

ಅಪರಾಧ ಪ್ರಕರಣವೊಂದರ ವಿಚಾರಣೆಗಾಗಿ ಅನುಮಾನದ ಮೇಲೆ ಮಹೇಂದ್ರ ರಾಥೋಡ್‌ ಎಂಬಾತನನ್ನು 2016ರ ಮಾ.19ರಂದು ಬೆಳಗ್ಗೆ 10.30ಕ್ಕೆ ಜೀವನ್‌ ಭೀಮಾನಗರ ಠಾಣೆಗೆ ಇನ್ಸ್‌ಪೆಕ್ಟರ್‌ ಎಂ.ಎಸ್‌. ಹಿತೇಂದ್ರ ಕರೆತಂದಿದ್ದರು. ಸಂಜೆ 4.15ರ ಸಮಯದಲ್ಲಿ ಅವರು ಕ್ರಿಕೆಟ್‌ ಪಂದ್ಯ ಬಂದೋಬಸ್ತ್‌ ಸಲುವಾಗಿ ಠಾಣೆಯಿಂದ ಹೊರಗೆ ಹೋಗಿದ್ದರು. ಆ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಏಜಾಜ್‌ ಖಾನ್‌ ಹಾಗೂ ಇತರೆ ಮೂವರು ಅಪರಾಧಿಗಳು ಮಹೇಂದ್ರ ರಾಥೋಡ್‌ಗೆ ಲಾಠಿ ಮತ್ತು ರೋಲರ್‌ಗಳಿಂದ ಹೊಡೆದು ದೈಹಿಕವಾಗಿ ಹಿಂಸೆ ನೀಡಿದ್ದರು.

ಈ ದೈಹಿಕ ಹಲ್ಲೆಯಿಂದ ರಾಥೋಡ್‌ನ ದೇಹದ ಸೂಕ್ಷ್ಮಭಾಗಗಳಿಗೆ ಗಾಯ ಉಂಟಾಗಿತ್ತು. ಬಲಪಾದದಲ್ಲಿ ಮೂಳೆ ಮುರಿದಿತ್ತು. ಇದರಿಂದ ಮೆದುಳು, ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆಯಾಗದೆ ರಾಥೋಡ್‌ ಸಾವನ್ನಪ್ಪಿದ್ದರು. ಇದರಿಂದ ಏಜಾಜ್‌ ಖಾನ್‌ ಸೇರಿ ನಾಲ್ವರು ಪೊಲೀಸರ ಮೇಲೆ ಜೀವನ್‌ ಭೀಮಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ನಡೆಸಿದ್ದ ಅಂದಿನ ಸಿಐಡಿ ಡಿಎಸ್‌ಪಿ ಎಸ್‌.ಟಿ. ಚಂದ್ರಶೇಖರ ಅವರು ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.