ಸಾರಾಂಶ
ಹಲಗೂರು : ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿ ಕೊಚ್ಚಿ ಹೋದ ಧಾರುಣ ಘಟನೆ ಶನಿವಾರ ನಡೆದಿದೆ. ಮೂಲತಃ ಕನಕಪುರ ತಾಲೂಕಿನ ಹುಣಸನಹಳ್ಳಿ ಗ್ರಾಮದ ಸಿದ್ದಾಚಾರಿ (28) ಕೊಚ್ಚಿ ಹೋದ ವ್ಯಕ್ತಿ ಎಂದು ಶಂಕಿಸಲಾಗಿದೆ.
ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಮರಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತ ಒಂದು ತಿಂಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದನು. ನಂತರದ ದಿನಗಳಲ್ಲಿ ತನ್ನ ಮಗುವನ್ನು ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದನು.
ಆತ್ಯಹತ್ಯೆ ಮಾಡಿಕೊಳ್ಳಲು ಮುತ್ತತ್ತಿಯ ಕಾವೇರಿ ನದಿಗೆ ಇಳಿದಿದ್ದು, ನೀರಿನ ರಭಸ ಹೆಚ್ಚಾಗಿದ್ದ ಪರಿಣಾಮ ಕೊಚ್ಚಿ ಹೋಗಿದ್ದಾನೆ. ಇದನ್ನು ಸ್ಥಳಿಯ ಪ್ರವಾಸಿಗರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಕಣ್ಮರೆಯಾದ ವ್ಯಕ್ತಿಯ ಶೋಧ ಮಾಡುವ ಕಾರ್ಯದಲ್ಲಿ ತೊಡಗಿದ್ದು, ಮಳವಳ್ಳಿ ತಹಸೀಲ್ದಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ- ಬೈಕ್ ನಡುವೆ ಭೀಕರ ಅಪಘಾತ ಓರ್ವ ಸಾವು, ಮತ್ತೊಬ್ಬನಿಗೆ ತೀವ್ರ ಗಾಯ
ಮಳವಳ್ಳಿ : ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿ, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾರ್ಕಾಲು ಗೇಟ್ ಬಳಿ ನಡೆದಿದೆ.
ತಾಲೂಕಿನ ಕೊದೇನಕೊಪ್ಪಲು ಗ್ರಾಮದ ಲೇ.ಕರಿಯಪ್ಪ ಪುತ್ರ ಮಾದೇಗೌಡ (63) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಬಸವೇಗೌಡ ತೀವ್ರಗಾಯಗೊಂಡವರು.ಮಾದೇಗೌಡ ತಮ್ಮ ಬೈಕ್ನಲ್ಲಿ ಬಸವೇಗೌಡ ಎಂಬುವವರ ಜತೆ ಕೊದೇನಕೊಪ್ಪಲು ಗ್ರಾಮದಿಂದ ಮಳವಳ್ಳಿಗೆ ಬರುತ್ತಿದ್ದ ವೇಳೆ ಮೈಸೂರು-ಮಳವಳ್ಳಿ ರಾಜ್ಯ ಹೆದ್ದಾರಿಯ ಮಾರ್ಕಾಲು ಗೇಟ್ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿ ರಭಸಕ್ಕೆ ಮೃತ ಮಾದೇಗೌಡರ ದೇಹ ರುಂಡ ಮುಂಡಗಳು ಎರಡು ಭಾಗವಾಗುವ ಜೊತೆಗೆ ಮೇಲ್ಬಾಗದ ದೇಹ ಸಂಪೂರ್ಣ ಛೀದ್ರಗೊಂಡಿದೆ.
ಅಪಘಾತ ನಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿದ್ದರೂ ಕೂಡ ಪೊಲೀಸರು ಸ್ಥಳಕ್ಕೆ ಬರುವತನಕ ಸಾರ್ವಜನಿಕರು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ ಹೊರತು ಹತ್ತಿರ ಹೋಗಲು ಯಾರು ಮುಂದೆ ಬಾರದಿರುವುದು ಮಾನವೀಯತೆ ಎಂಬ ಪದ ಘಟನೆ ಸ್ಥಳದಲ್ಲಿ ಅಣಕ ಮಾಡುವಂತಿತ್ತು.ಅಪಘಾತವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ತಮ್ಮ ಕಾರಿನಲ್ಲಿಯೇ ಗಾಯಗೊಂಡ ಬಸವೇಗೌಡರನ್ನು ಕರೆತಂದು ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.